ಇತ್ತೀಚಿನ ಸುದ್ದಿ
ಮಂಗಳೂರು: ಜನಸ್ನೇಹಿ ವೈದ್ಯ ಪದವಿನಂಗಡಿಯ ಡಾ. ಭರತ್ ಕುಮಾರ್ ಇನ್ನಿಲ್ಲ
06/07/2026, 22:09
ಮಂಗಳೂರು(reporterkarnataka.com): ನಗರದ ಜನಪ್ರಿಯ ವೈದ್ಯ ಡಾ. ಭರತ್ ಕುಮಾರ್ ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಪದವಿನಂಗಡಿಯಲ್ಲಿ ಕ್ಲಿನಿಕ್ ಹೊಂದಿದ್ದ ಅವರು 3 ದಶಕಗಳಿಗೂ ಹೆಚ್ಚು ಕಾಲ ಜನಸ್ನೇಹಿ ವೈದ್ಯರಾಗಿ ಸುತ್ತಮುತ್ತಲಿನ ಬಡ ಕುಟುಂಬದವರಿಗೆ ವೈದ್ಯಕೀಯ ಸೇವೆ ನೀಡಿದ್ದರು.
ದಶಕಗಳ ಕಾಲ ಪದವಿನಂಗಡಿ, ಕೊಂಚಾಡಿ, ಪಚ್ಚನಾಡಿ, ಬೊಂದೇಲ್, ಕಾವೂರು, ದೇರೆಬೈಲ್ ಸೇರಿದಂತೆ ಮಂಗಳೂರಿನ ಬಹುತೇಕ ಕಡೆಗಳ ಜನರಿಗೆ ವೈದ್ಯರಾಗಿ ಸೇವೆ ಜನಸ್ನೇಹಿ ವೈದ್ಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಕಡಿಮೆ ಫೀಸಿನಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದು ಮಾತ್ರವಲ್ಲದೆ ರೋಗಿಗಳ ಜತೆ ಆಪ್ತತೆ ಇಟ್ಟುಕೊಂಡಿದ್ದರು. ನಗುವೇ ಮರೆತು ಬಿಟ್ಟಿರುವ ಬಹುತೇಕ ಡಾಕ್ಟರ್ ಗಳ ನಡುವೆ ಡಾ. ಭರತ್ ಕುಮಾರ್ ಅವರು ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕಷ್ಟ ಸುಖವನ್ನು ವಿಚಾರಿಸುತ್ತಿದ್ದರು.
ವೈದ್ಯರೆಂದರೆ ಯಮನ ತಮ್ಮ ಎಂದು ಜನರು ಹೆದರಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಡಾ. ಭರತ್ ಕುಮಾರ್ ಅವರು ಮೇರು ವ್ಯಕ್ತಿತ್ವದ ತೀರಾ ಅಪರೂಪದ ವೈದ್ಯರು. ರಿಪೋರ್ಟರ್ ಕರ್ನಾಟಕ ಬಳಗದಿಂದ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ.












