ಇತ್ತೀಚಿನ ಸುದ್ದಿ
ಕುಂದಾಪುರ | ಅಸೋಡು ವಾರಾಹಿ ಕಾಲುವೆಗೆ ಬಿದ್ದ ಕಾಡುಕೋಣ ರಕ್ಷಣೆ
26/04/2026, 10:02
ಕುಂದಾಪುರ(reporterkarnataka.com):ಕುಂದಾಪುರ ಕಾಳಾವರ ಗ್ರಾ.ಪಂ. ವ್ಯಾಪ್ತಿಯ ಅಸೋಡು ಶ್ರೀ ಕುಮಾರ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ವಾರಾಹಿ ಕಾಲುವೆಯಲ್ಲಿ ಬಿದ್ದಿದ್ದ ಭಾರೀ ಗಾತ್ರದ ಕಾಡುಕೋಣವನ್ನು ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬಂದಿ ರಕ್ಷಿಸಿದ್ದಾರೆ.ನೀರು ಮತ್ತು ಆಹಾರ ಅರಸಿ ಸಮೀಪದ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡುಕೋಣ ಶುಕ್ರವಾರ ಆಕಸ್ಮಿಕವಾಗಿ ಅಸೋಡಿನ ವಾರಾಹಿ ಕಾಲುವೆಗೆ ಬಿದ್ದಿತ್ತು. ಬರೋಬ್ಬರಿ 20 ತಾಸುಗಳ ಕಾಲ ಕಾಲುವೆಯಲ್ಲಿದ್ದ ಅದು ಕಾಲುವೆಯಿಂದ ಮೇಲಕ್ಕೆ ಬರಲು ಹರಸಾಹಸ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.
ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ, ಸ್ಥಳೀಯರ ಸಹಕಾರದಿಂದ ಶನಿವಾರ ಬೆಳಗ್ಗೆ ರಕ್ಷಣ ಕಾರ್ಯಾಚರಣೆ ಆರಂಭಿಸಿದ್ದರು.
ಕಾಳಾವರ ಗ್ರಾ.ಪಂ. ಮಾಜಿ ಸದಸ್ಯ ಚಂದ್ರ ಪೂಜಾರಿ ಕಾಳಾವರ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾರ್ಗದರ್ಶನದಲ್ಲಿ ಉಪ ಅರಣ್ಯಾಧಿಕಾರಿಗಳಾದ ವಿನಯ್, ಗುರು ನಾಯ್ಕ್, ಸಿಬಂದಿ ಮಾಲತಿ, ರಂಜಿತ್, ಸುನೀಲ್ ಮತ್ತು ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












