ಇತ್ತೀಚಿನ ಸುದ್ದಿ
ಮಹಿಳಾ ಮೀಸಲಾತಿ ಬಿಲ್ | ಬಿ.ಸಿ.ರೋಡ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
25/04/2026, 21:22
ಬಂಟ್ವಾಳ(reporterkarnataka.com): ದ.ಕ. ಗ್ರಾಮೀಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡು ಪ್ಲೈ ಓವರ್ ನ ಕೆಳಭಾಗದಲ್ಲಿ ಇಂದು 2023ರ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರದೇ ದೇಶದ ಮಹಿಳೆಯರಿಗೆ ಸುಳ್ಳು ಹೇಳಿ ದ್ರೋಹ ಮಾಡಿದ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆ ನೀಡಿದೆ. ಆದರೆ ಬಿಜೆಪಿಯಾಗಲಿ ಅಥವಾ ಆರ್.ಎಸ್.ಎಸ್. ಆಗಲಿ ಮಹಿಳೆಯರಿಗೆ ನೀಡಿದ ಅವಕಾಶಗಳ ಬಗ್ಗೆ ತಿಳಿಸಲಿ. ಆದರೆ ಬಿಜೆಪಿ ಮಹಿಳೆಯರ ಮೀಸಲಾತಿ ವಿಚಾರವನ್ನು ಜನರ ಮುಂದಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪ ಮಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧ್ಯಕ್ಷೆ ಉಷಾ ಅಂಚನ್, ಪ್ರಮುಖರಾದ ಆರ್.ಪದ್ಮರಾಜ್, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾಂಗ್ರೇಸ್ ಪ್ರಮುಖರಾದ ಐಡಾ ಸುರೇಶ್, ಅಮಿತಾ ಭಂಡಾರಿ, ಆಸ್ಮಾ ಹಸೈನಾರ್, ಎ.ಬಿ.ಅಬ್ದುಲ್ಲಾ ಕೊಳ್ನಾಡು, ಬೇಬಿ ಕುಂದರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.












