ಇತ್ತೀಚಿನ ಸುದ್ದಿ
ಮಂಗಳೂರು | ಮೇ 1ರಿಂದ ನೀರಿನ ರೇಷನಿಂಗ್ ಜಾರಿ: ಜಿಲ್ಲಾಧಿಕಾರಿ ಆದೇಶ
24/04/2026, 18:38
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿ ಮೇ 1 ರಿಂದ ನೀರಿನ ರೇಷನಿಂಗ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
*ರೇಷನಿಂಗ್ ಯಾಕೆ:?*
ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದ್ದು, ವಿಶೇಷವಾಗಿ ಸುರತ್ಕಲ್ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಿಕೆಯ ಎಲ್ಲಾ 60 ವಾರ್ಡ್ಗಳಿಗೂ ನ್ಯಾಯಯುತವಾಗಿ ನೀರು ಹಂಚಿಕೆಯಾಗಲಿ ಎಂಬ ನಿಟ್ಟಿನಲ್ಲಿ ಇನ್ನು ಮುಂದೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗಲಿದೆ.
ನೀರಿನ ಲಭ್ಯತೆ
“ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಡ್ಯಾಂನಲ್ಲಿ ಸದ್ಯ ಸಾಕಷ್ಟು ನೀರು ಸಂಗ್ರಹವಿದೆ. ಜೂನ್ 11ರವರೆಗೆ ನಗರಕ್ಕೆ ನೀರು ಪೂರೈಸಲು ಯಾವುದೇ ತಾಂತ್ರಿಕ ತೊಂದರೆಯಿಲ್ಲ. ಪ್ರಸ್ತುತ ತುಂಬೆಯಿಂದ ನಿತ್ಯ 160 ಎಂಎಲ್ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೇಸಿಗೆಯ ಅಂತ್ಯದವರೆಗೆ ನೀರಿನ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಈ ರೇಷನಿಂಗ್ ಪದ್ಧತಿ ಅನಿವಾರ್ಯವಾಗಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.












