ಇತ್ತೀಚಿನ ಸುದ್ದಿ
ಮಂಗಳೂರು ಕಮಿಷನರೇಟ್ ಪೊಲೀಸರಿಗೆ ತುಳು, ಬ್ಯಾರಿ ಭಾಷೆ ಕಾರ್ಯಾಗಾರ ಸಮಾಪ್ತಿ
21/09/2021, 18:18
ಚಿತ್ರ :ಅನುಷ್ ಪಂಡಿತ್
ಮಂಗಳೂರು(reporterkarnataka.com): ತುಳುನಾಡಿನಲ್ಲಿ ಕರ್ತವ್ಯನಿರತ ಪೊಲೀಸರಿಗೆ ಸ್ಥಳೀಯ ತುಳು ಮತ್ತು ಬ್ಯಾರಿ ಭಾಷೆ ಕಲಿತು ಜನಸಾಮಾನ್ಯರೊಂದಿಗೆ ಆತ್ಮೀಯತೆಯಿಂದ ಬೆರೆತು ಕೆಲಸ ಮಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಒಂದು ತಿಂಗಳ ಕಾಲ ಕಾರ್ಯಾಗಾರ ಏರ್ಪಡಿಸಲಾಯಿತು.
ತುಳು ಮತ್ತು ಬ್ಯಾರಿ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭ ಮಂಗಳವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಭಾಷೆಯ ಮೂಲಕ ಮಂಗಳೂರಿನ ಜನರ ವಿಶ್ವಾಸಗಳಿಸಿ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ. ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ತುಳು ಮತ್ತು ಬ್ಯಾರಿ ಭಾಷೆ ಕಲಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಮೂಲಕ ಪೊಲೀಸರು ಜನರಿಗೆ ಹತ್ತಿರವಾಗುತ್ತಾರೆ ಎಂಬ ಭಾವನೆ ನಮ್ಮದಾಗಿದೆ. ಭಾಷೆಗಳನ್ನು ಕಲಿತಷ್ಟು, ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಆಯುಕ್ತರು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಮಾತಾನಾಡಿ, ಪೊಲೀಸರಿಗೆ ತುಳು ಮತ್ತು ಬ್ಯಾರಿ ಭಾಷೆ ಕಲಿಸುವ ಕಾರ್ಯ ಪ್ರಶಂಶನೀಯ. ತುಳು ಕಲಿಕೆಗೆ ಮಾತ್ರ ಸೀಮಿತವಾಗಿ ಉಳಿಯದೆ ಅದರ ಬಳಕೆ ನಿರಂತರವಾಗಿರಬೇಕು ಎಂದು ಹೇಳಿದರು.
ಪೋಲಿಸ್ ವಿದ್ಯಾರ್ಥಿಗಳಿಗೆ ತುಳುಬಾಷೆಯನ್ನು ಕಲಿಸಿದ ಉಪನ್ಯಾಸಕ, ಪತ್ರಕರ್ತ ರಾಜೇಶ್ ಕದ್ರಿ ಹಾಗೂ ಬ್ಯಾರಿ ಭಾಷಾ ಉಪನ್ಯಾಸಕ ಅಶೀರುದ್ದೀನ್ ಸಾರ್ತಬೈಲ್,ಶಂಶೀರ್ ಬುಡೋಳಿ ಹಾಗೂ ಹಿಂದಿನ ಸಾಲಿನಲ್ಲಿ ಪೊಲೀಸ್ ಶಿಬಿರಾರ್ಥಿಗಳಿಗೆ ತುಳುಭಾಷೆ ಕಲಿಸಿದ ಸುಧಾ ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಇನ್ನೋರ್ವ ಬ್ಯಾರಿ ಭಾಷಾ ಉಪನ್ಯಾಸಕ ರಝಾಕ್ ಅನಂತಾಡಿ ಪೊಲೀಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದರು.