ಇತ್ತೀಚಿನ ಸುದ್ದಿ
10ನೇ ವರ್ಷದ ಸಂಭ್ರಮದಲ್ಲಿ ನಂಜನಗೂಡು ಕೃಷ್ಣ ಆಸ್ಪತ್ರೆ: ಏಪ್ರಿಲ್ 7ರಿಂದ ಮೇ 7ರ ವರೆಗೆ ಎಲ್ಲ ಶಸ್ತ್ರ ಚಿಕಿತ್ಸೆಗಳಿಗೂ ಶೇ. 40ರಷ್ಟು ರಿಯಾಯಿತಿ
06/04/2024, 19:48

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
1958 ರಲ್ಲಿ ನಂಜನಗೂಡಿನಲ್ಲಿ ಕೃಷ್ಣ ಕ್ಲಿನಿಕ್ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ ಸುತ್ತಮುತ್ತಲಿನ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು 2014ರಲ್ಲಿ ಮತ್ತಷ್ಟು ಉತ್ತಮ ಸ್ಪೆಷಾಲಿಟಿ ಯೊಂದಿಗೆ ನೂರು ಹಾಸಿಗೆಯ ಕೃಷ್ಣ ಆಸ್ಪತ್ರೆಯಾಗಿ ಪ್ರಾರಂಭಗೊಂಡು ಹತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಎಂದು ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಗೀತಾ ತಿಳಿಸಿದ್ದಾರೆ.
ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು
ಕಳೆದ ಹತ್ತು ವರ್ಷದಿಂದ ನಮ್ಮ ಆಸ್ಪತ್ರೆಯು ಅತ್ಯಂತ ಪ್ರಾಮಾಣಿಕವಾಗಿ ಬಡವರ ಹಾಗೂ ಮಧ್ಯಮ ವರ್ಗದವರಿಗೂ ಕೈಗೆಟುಕುವಂತಹ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಇದರ ಜೊತೆಗೆ ಕೊರೋನಾ ಸೇರಿದಂತೆ ಸರ್ಕಾರದ ಬಹುತೇಕ ಎಲ್ಲಾ ಉಚಿತ ವೈದ್ಯಕೀಯ ಯೋಜನೆಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಿದೆ ಎಂದು ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
10ನೇ ವರ್ಷದ ಸಂಭ್ರಮದ ಪ್ರಯುಕ್ತ ಏಪ್ರಿಲ್ 7 ರಿಂದ ಮೇ 7ರ ವರೆಗೆ ಒಂದು ತಿಂಗಳ ಕಾಲ ನಮ್ಮ ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ಶಸ್ತ್ರ ಚಿಕಿತ್ಸೆ ಗಳಿಗೂ ಶೇಕಡ 40ರಷ್ಟು ರಿಯಾಯಿತಿ ನೀಡಲಾಗುತ್ತದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಏಪ್ರಿಲ್ 7ರಂದು ಸಂಜೆ ಪಟ್ಟಣದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲದೆ ಮುಂದಿನ ದಿನಗಳಲ್ಲಿ ನಂಜನಗೂಡಿನ ಕೃಷ್ಣ ಆಸ್ಪತ್ರೆಯು ಮೈಸೂರಿನಲ್ಲಿ ಮತ್ತೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ ಮತ್ತಷ್ಟು ಉತ್ತಮ ಹಾಗೂ ಗುಣಮಟ್ಟದ ಸೇವೆಗೆ ಮುಂದಾಗಲಿದೆ ಎಂದು ಈ ಸಂದರ್ಭ ತಿಳಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಪವನ್ ಕುಮಾರ್ ಹಾಗೂ ಸಿಬ್ಬಂದಿಗಳು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.