ಇತ್ತೀಚಿನ ಸುದ್ದಿ
ಯುವ ವಕೀಲರ ಮೇಲೆ ಪುಂಜಾಲಕಟ್ಟೆ ಠಾಣೆ ಪೊಲೀಸರ ದೌರ್ಜನ್ಯ: ಮಂಗಳೂರು ವಕೀಲರ ಸಂಘ ಖಂಡನೆ
05/12/2022, 20:33

ಮಂಗಳೂರು(reporterkarnataka.com): ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಪೋಲೀಸರು ನಡೆಸಿದ ದೌರ್ಜನ್ಯವನ್ನು ಮಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ದ ಪ್ರತಿಬಂದಕಾಜ್ಞೆ ಇದ್ದೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲರ ಮೇಲೆ ಎಫ್ ಐಆರ್ ದಾಖಲಿಸಿ ರಾತೋರಾತ್ರಿ ವಕೀಲರ ಮನೆ ಪ್ರವೇಶ ಮಾಡಿ ವಕೀಲರನ್ನು ಮನೆಯಿಂದ ಎಳೆದುಕೊಂಡು ಹೋಗಿ ನಡೆಸಿದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಬಂಟ್ವಾಳದ ನ್ಯಾಯಾಲಯ ಕೂಡ ಪೋಲೀಸರ ದೌರ್ಜನ್ಯವನ್ನು ತನಿಖೆ ಮಾಡಿ ವರದಿ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗೆ ನಿರ್ದೇಶನ ಕೂಡ ನೀಡಿರುತ್ತಾರೆ. ಹಾಗಾಗಿ ನ್ಯಾಯಾಲಯದ ಆದೇಶದಂತೆ ಈ ಕೂಡಲೇ ತಪ್ಪಿತಸ್ತ ಪೋಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಯವರನ್ನು ಮತ್ತು ಸರಕಾರವನ್ನು ಒತ್ತಾಯಿಸುತ್ತೇವೆ .
ಕೂಡಲೇ ಕ್ರಮ ಕೈಗೊಳ್ಳಲು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.