8:00 PM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಯಕ್ಷಗಾನದ ಅಗ್ರಮಾನ್ಯ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ: 15ರ ಹರೆಯದಲ್ಲೇ ರಂಗ ಪ್ರವೇಶ

12/10/2021, 19:29

ಮಂಗಳೂರು( reporterkarnataka.com): ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು (66) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. 

ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರು ‘ಯಕ್ಷರತ್ನ’ ಬಿರುದಿಗೆ  ಭಾಜನರಾಗಿದ್ದರು. ಅವರಿಗೆ ಯಕ್ಷಗಾನ ಮನೆತನದ ಬಳುವಳಿ. ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳ ವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ. ಪದ್ಯಾಣ ತಿರುಮಲೇಶ್ವರ ಭಟ್- ಸಾವಿತ್ರಿ ದಂಪತಿಯ ಪುತ್ರರಾಗಿ ಜನಿಸಿದ ಅವರಿಗೆ ಮನೆಯೇ ಮೊದಲ ಯಕ್ಷಗಾನ ಪಾಠ ಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ 15ರ ಹರೆಯದಲ್ಲೆ ಯಕ್ಷರಂಗ ಪ್ರವೇಶಿಸಿದರು. ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನ ಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸರಾಗ ಸಂಯೋಜನೆ ಮಾಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರು. 1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಇವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರನಾಡುಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ. ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಇವರು ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಕನ್ನಡಿಕಟ್ಟೆಯಂತಹ ಯುವ ಭಾಗವತರು ಇವರ ಗರಡಿಯಲ್ಲಿ ಸಿದ್ಧಗೊಂಡಿದ್ದಾರೆ. ನಿಡುಗಾಲದ ಯಕ್ಷಗಾನಕ್ಕೆ ಪುರಸ್ಕಾರ ರೂಪವಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರು. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ  ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು