9:32 AM Monday12 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಕೊಡಗಿನ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಾಡಿದ ತಪ್ಪಾದರೂ ಏನು? ಆಕೆಯ ಅಭಿನಯ ಅಭಿಮಾನಿಸುವುದು ಒಳಿತಲ್ಲವೇ?

07/07/2025, 11:09

ತೆನ್ನಿರ ಮೈನಾ ಮಡಿಕೇರಿ

info.reporterkarnataka@gmail.com

ಕೊಡಗಿನ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಹು ಬೇಡಿಕೆಯ ನಟಿ. ನ್ಯಾಷನಲ್ ಕ್ರಷ್ ಎಂದು ಬಿಂಬಿತರಾಗಿದ್ದಾರೆ.
ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ತಮ್ಮ ಹೇಳಿಕೆಗಳ ಮೂಲಕ ವಿವಾದಕ್ಕೆ ಒಳಗಾಗಿ ಟೀಕಗಳನ್ನು ಎದುರಿಸುವ ಪ್ರಸಂಗ ಆಗ್ಗಾಗ್ಗೆ ಬಂದಿದೆ.
ರಶ್ಮಿಕಾ ಸಹಜ ಸೌಂದರ್ಯ ಹೊಂದಿದ್ದಾರೆ ಹೊರತು ಅಂತಹ ಮಾದಕ ಮೈಮಾಟವನ್ನು ಹೊಂದಿರುವ ತ್ರಿಪುರ ಸುಂದರಿಯೇನೆಲ್ಲಾ.
ಆದರೂ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಅದು ಅವರ ನಟನಾ ಕೌಶಲ್ಯ ದಿಂದ ಎಂದು ನಿಸ್ಸಂಶಯವಾಗಿ ಹೇಳಬಹುದು. ತನಗೆ ದೊರೆತ ಪಾತ್ರಗಳಿಗೆ ಆಕೆ ಜೀವಕಳೆ ತುಂಬಿದ್ದಾಳೆ. ರಶ್ಮಿಕಾ ನಟಿಸಿರುವ ಕೆಲವು ಸಿನಿಮಾಗಳಲ್ಲಿ ಆಕೆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾಳೆ ಎಂದು ಆ ಚಿತ್ರ ವೀಕ್ಷಣೆ ಮಾಡಿದವರ ಅಭಿಪ್ರಾಯ. ಕಿರಿಕ್ ಪಾರ್ಟಿಯ ಸಾನ್ವಿ ಜೋಸೆಫ್, ಅಂಜನಿ ಪುತ್ರ ಸಿನಿಮಾದ ಗೀತಾ ಪಾತ್ರ,ಯಜಮಾನ ಚಿತ್ರದ ಕಾವೇರಿ ಪಾತ್ರಕ್ಕೆ ಆಕೆ ನ್ಯಾಯ ನೀಡಿದ್ದಾಳೆ.ಪ್ಯಾನ್ ಇಂಡಿಯಾ ಚಿತ್ರಗಳಾದ ಗೀತಾ ಗೋವಿಂದ, ಪುಷ್ಪಾ1 ,ಪುಷ್ಪಾ 2 ಗಳಲ್ಲಿ ಆಕೆಯ ಮನೋಜ್ಞ ಅಭಿನಯಕ್ಕೆ ಎಲ್ಲರೂ ಮನಸೋತಿದ್ದಾರೆ.
ಪುಷ್ಪ ಚಿತ್ರದ ಶ್ರೀವಲ್ಲಿ ಪಾತ್ರ,ಸೀತಾರಾಮಂ ಚಿತ್ರದ ವಹೀದಾ ಪಾತ್ರಗಳಲ್ಲಿ ಆಕೆಯ ಅಭಿನಯದ ಪರಾಕಾಷ್ಠೆಯನ್ನು ಕಾಣಬಹುದು.
ಒಟ್ಟಿನಲ್ಲಿ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ.
ನಟನೆಯಲ್ಲಿ ಅಭೂತಪೂರ್ವ ಸಾಧನೆ,ಕೌಶಲ್ಯಗಳನ್ನು ಪ್ರದರ್ಶಿಸಿ ನ್ಯಾಷನಲ್ ಕ್ರಷ್ ಎಂದು ಹೆಸರು ಸಂಪಾದಿಸಿರುವ ಕೊಡವತಿ,ಕನ್ನಡಿಗತಿ ದಕ್ಷಿಣ ಭಾರತದ ಅಭಿನೇತ್ರಿ ಯಾಗಿರುವ ರಶ್ಮಿಕಾ ಮಂದಣ್ಣ ಸಿನಿಮಾದಿಂದ ಹೊರತಾದ ಮಾತುಗಳನ್ನು ಆಡುವಾಗ ವಿವಾದಕ್ಕೆ ಎಡೆ ಮಾಡಿದ್ದಾರೆ. ಅದು ಟೀಕಾಕಾರರ ಕಟು ವಿಮರ್ಶೆಗೆ ಒಳಗಾಗಿದ್ದು ಹಲವು ಬಾರಿ ಎಲ್ಲರೂ ಗಮನಿಸಿದ್ದಾರೆ.
ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಜಗತ್ತಿನ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಲು ಚಾನೆಲ್ ಮುಂದೆ ಕುಳಿತ ಪ್ಯಾನಲಿಸ್ಟ್ ಅಲ್ಲಾ. ಸಾಹಿತ್ಯ ಸಂಸ್ಕೃತಿಗಳನ್ನು ಅಗಾಧವಾಗಿ ಅಧ್ಯಯನ ಮಾಡಿದ ಪಂಡಿತಳು ಅಲ್ಲಾ. ಸಮಾಜದ ಆಗು ಹೋಗುಗಳ ಬಗ್ಗೆ ಸಲಹೆ ನೀಡುವ ಪ್ರಬುದ್ದತೆ ಹೊಂದಿದ ವಿಚಾರವಂತೆ ಅಲ್ಲಾ. ಆಕೆ ಒಬ್ಬ ಕಲಾವಿದೆ. ಕಲಾವಿದೆಯಾಗಿ ಆಕೆಯ ಸಾಧನೆ ಹೆಮ್ಮೆ ಪಡುವಂತದ್ದು.
ಆಕೆಯನ್ನು ಸಂದರ್ಶನ ಮಾಡುವಾಗ ನಿರೂಪಕಿ ಕುಟುಂಬದವರಿಂದ ನಿಮ್ಮ ಸಿನಿಮಾ ಪ್ರಯಾಣಕ್ಕೆ ಯಾವ ರೀತಿ ಪ್ರೋತ್ಸಾಹ ನೀಡಿದ್ದಾರೆ ಎಂದು ಕೇಳಿದಾಗ ನಮ್ಮ ಕುಟುಂಬದಲ್ಲಿ ಯಾರಿಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ ಎಂಬುದನ್ನು ವಿವರಿಸುವಾಗ ನಾನೇ ನನ್ನ ಕುಟುಂಬ ಮತ್ತು ಸಂಬಂಧಿಕರಲ್ಲಿ ಪ್ರಥಮವಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವಳು ಎಂಬುದನ್ನು ಹೇಳುವಾಗ ಕೊಡವ ಸಮುದಾಯದಿಂದ ಪ್ರಥಮ ಎಂದು ಹೇಳಿರಬಹುದು.
ಅದು ಅಕ್ಷಮ್ಯ ಅಪರಾಧವೇನಲ್ಲಾ.
ಬಹುಶಃ ಕನ್ನಡದ ನಿರೂಪಕರು ಪ್ರಶ್ನೆ ಮಾಡಿದ್ದರೆ ಆಕೆಗೆ ಇತರ ನಟಿಯರ ಬಗ್ಗೆ ವಿವರಿಸುತ್ತಿದ್ದರು. ರಶ್ಮಿಕಾ ಇಲ್ಲಿಯವರೆಗೆ ಯಾರನ್ನೂ ಅಪಮಾನಿಸಲಿಲ್ಲ.


ಮುಂಬೈನಲ್ಲಿ ಹೋದಾಗ ನನ್ನ ‌ಮನೆ ಹೈದ್ರಾಬಾದ್ ನಲ್ಲಿದೆ.ಇಲ್ಲಿಗೆ ಬಂದಾಗ ನನ್ನ ಮನೆಗೆ ಬಂದ ಹಾಗೆ ಆಗಿದೆ ಎಂದಿದ್ದರು.ಅದು ಕೂಡ ಸಹಜವಾದ ಉತ್ತರವಾಗಿತ್ತು.
ಅದೇನೆ ಇರಲಿ ಕೊಡಗಿನ ವಿರಾಜಪೇಟೆ ಯಂತಹ ಸಣ್ಣ ಪಟ್ಟಣದಲ್ಲಿ ಜನಿಸಿ ಸಣ್ಣ ವಯಸ್ಸಿನಲ್ಲಿಯೇ ತನ್ನ ಸಾಧನೆಯ ಮೂಲಕ ಕೀರ್ತಿಯನ್ನು ಸಂಪಾದಿಸಿರುವ ರಶ್ಮಿಕಾ ಮಂದಣ್ಣ ಕೊಡಗಿನ,ಕರ್ನಾಟಕದ ಅಮೂಲ್ಯ ಆಸ್ತಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ನವರ ನಟನೆಯ ಬಗ್ಗೆ ವಿವಾದ ಇಲ್ಲದಿರುವಾಗ ಎಲ್ಲವನ್ನು ಬದಿಗಿರಿಸಿ ಅವರ ಅಭಿನಯವನ್ನು ಅಭಿಮಾನಿಸುವುದು ಒಳಿತಲ್ಲವೇ?

ಇತ್ತೀಚಿನ ಸುದ್ದಿ

ಜಾಹೀರಾತು