ಇತ್ತೀಚಿನ ಸುದ್ದಿ
ವಿಜಯಪುರ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಜನತಾದಳ, ಪಕ್ಷೇತರರ ಬೆಂಬಲದಿಂದ ಮೆಹಜಬೀನ್ ಹೊರ್ತಿ ಮೇಯರ್
09/01/2024, 21:31

ವಿಜಯಪುರ(reporterkarnataka.com): ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಹೊಂದಿದ್ದರೂ 10 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಎಐಎಂಐಎಂ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ನ ಮೆಹಜಬೀನ್ ಹೊರ್ತಿ ಮೇಯರ್ ಹಾಗೂ ಅದೇ ಪಕ್ಷದ ದಿನೇಶ್ ಹಳ್ಳಿ ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಮಹೆಜಬೀನ್ ಹೊರ್ತಿ ಒಟ್ಟು 22 ಮತಗಳನ್ನು ಪಡೆದು ಆಯ್ಕೆಯಾದರು. 10 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂ.ಬಿ. ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಠೋಡ್ ಮತಗಳ ಬೆಂಬಲದೊಂದಿಗೆ ಗೆಲವು ಸಾಧಿಸಿದ್ದಾರೆ.
ಬಿಜೆಪಿಯ 17 ಸದಸ್ಯರ ಪೈಕಿ ಓರ್ವ ಬಿಜೆಪಿ ಸದಸ್ಯ ನಿಧನರಾಗಿದ್ದು, 16 ಸದಸ್ಯರ ಜೊತೆಗೆ ನಗರ ಶಾಸಕ
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ರಮೇಶ ಜಿಗಜಿಣಗಿ ಮತ ಸೇರಿ ಒಟ್ಟು 18 ಮತಗಳು ಮಾತ್ರ ಬಿಜೆಪಿ ಕೈಯ್ಯಲ್ಲಿತ್ತು. ಓರ್ವ ಸದಸ್ಯ ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬಾರದು ಎಂದು ಬಿಜೆಪಿ ಮನವಿ ಮಾಡಿತ್ತು.
ಎಸ್ಟಿ ಸಮಾಜಕ್ಕೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಮಾತ್ರ ಸ್ಪರ್ಧಿಸಿರುವುದರಿಂದ ಅವರು
ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಬಿಜೆಪಿಯ 16 ಸದಸ್ಯರು ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರ ನಡೆದ ಪ್ರಸಂಗ ನಡೆಯಿತು. ಇದು ಅಕ್ರಮದ ಚುನಾವಣೆಯಾಗಿದ್ದು ಸರ್ಕಾರದ ಅಣತಿಯಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿದ್ದಾರೆ. ಈ ಚುನಾವಣೆಯ ಬಗ್ಗೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಯತ್ನಾಳ್ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್, ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿ ಮೊದಲೇ ಸೋಲು ಒಪ್ಪಿಕೊಂಡಿತ್ತು. ಎಲ್ಲರ ಸಹಾಯದಿಂದ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ನಗರದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ ಎಂದು ಹೇಳಿದರು.