ಇತ್ತೀಚಿನ ಸುದ್ದಿ
ಬೃಹತ್ ಕೈಗಾರಿಕೆ, ಉಕ್ಕು ಸಚಿವಾಲಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
13/05/2025, 20:43

ನವದೆಹಲಿ(reporterkarnataka.com): ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಮಂಗಳವಾರ ತಮ್ಮ ಉಸ್ತುವಾರಿಯ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಪರಿಶೀಲನಾ ಸಭೆಗಳನ್ನು ನಡೆಸಿದರು.
ಎರಡೂ ಸಚಿವಾಲಯಗಳಲ್ಲಿ ನಡೆಯುತ್ತಿರುವ ಅಭಿವೃಧ್ಧಿ ಕಾರ್ಯಕ್ರಮಗಳು ಹಾಗೂ ಈಗಾಗಲೇ ಅನುಷ್ಠಾನಕ್ಕೆ ತರಲಾಗಿರುವ ಮಹತ್ವದ ಕಾರ್ಯಕ್ರಮಗಳ ಬಗ್ಗೆ ಸಚಿವರು ಕೂಲಂಕಶವಾಗಿ ಚರ್ಚೆ ನಡೆಸಿದರು.
*ಬೃಹತ್ ಕೈಗಾರಿಕೆ ಸಚಿವಾಲಯ:*
ಬೃಹತ್ ಕೈಗಾರಿಕೆ ಸಚಿವಾಲಯದ ಸಭೆಯಲ್ಲಿ ಕೇಂದ್ರ ಸಚಿವರು ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತಾದ ಪಿಎಂ ಇ ಡ್ರೈವ್ ಹಾಗೂ ಉತ್ಪಾದನಾ ಸಂಪರ್ಕ ಸೌಲಭ್ಯ (PLI) ಕಾರ್ಯಕ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೆಲ ನಿರ್ದಿಷ್ಟ ಸೂಚನೆಗಳನ್ನು ನೀಡಿದರು.
ರಸ್ತೆ ಸಾರಿಗೆ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಬೇಕಾಗಿದ್ದು, ಆ ದಿಸೆಯಲ್ಲಿ ಪ್ರಧಾನಿಗಳು ನಿಗದಿ ಮಾಡಿರುವ ಗುರಿಗಳನ್ನು ಮುಟ್ಟುವ ಬಗ್ಗೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು. ಹೆಚ್ಚೆಚ್ಚು ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹಗಳ ಬಳಕೆಯನ್ನು ಉತ್ತೇಜಿಸುವುದು, ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಇನ್ನಿತರೆ ಮೂಲಸೌಕರ್ಯ ಅಭಿವೃದ್ಧಿ ಕುರಿತೂ ಅಧಿಕಾರಗಳು ಸಚಿವರಿಗೆ ಮಾಹಿತಿ ನೀಡಿದರು.
ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಯೋಜನೆಗಳ ಅಡಿಯಲ್ಲಿ ದೇಶಿಯವಾಗಿ ಎಲೆಕ್ಟಿಕ್ ವಾಹನಗಳನ್ನು ಅಗತ್ಯ ಪ್ರಮಾಣದಲ್ಲಿ ತಯಾರಿಸುವುದಕ್ಕೆ ಸಚಿವಾಲಯ ಹೆಚ್ಚು ಉತ್ತೇಜನ ನೀಡಬೇಕು ಎಂದು ಸಚಿವರು ಒತ್ತಿ ಹೇಳಿದರು.
*ಉಕ್ಕು ಸಚಿವಾಲಯ:*
ಉಕ್ಕು ಸಚಿವಾಲಯದ ಸಭೆಯಲ್ಲಿ ವಿಶೇಷವಾಗಿ ಸಾರ್ವಜನಿಕ ವಲಯದ ಸ್ಥಾವರಗಳ ಕಾರ್ಯನಿರ್ವಹಣೆ ಬಗ್ಗೆ ಸಚಿವರು ಹೆಚ್ಚು ಮಾಹಿತಿ ಪಡೆದುಕೊಂಡರು.
ಈಗಾಗಲೇ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಉಕ್ಕು ಉತ್ಪಾದಕ ಕಂಪನಿಗಳ ಪ್ರಗತಿ ಹಾಗೂ ಉತ್ಪಾದಕತೆಯ ಕ್ಷಮತೆ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಉಕ್ಕು SAIL ವಿಸ್ತರಣೆ ಹಾಗೂ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ವೈಜಾಗ್ ಸ್ಟೀಲ್) ಕಾರ್ಯಕ್ಷಮತೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
₹11,400 ಕೋಟಿ ಪರಿಹಾರ ಪ್ಯಾಕೇಜ್ ನೀಡಿದ ನಂತರ ಕಾರ್ಖಾನೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಸಚಿವರು ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಅಲ್ಲದೆ; ಉಕ್ಕು ಕ್ಷೇತ್ರದಲ್ಲಿ ಮಾಲಿನ್ಯವನ್ನು ಶೂನ್ಯಮಟ್ಟಕ್ಕೆ ಇಳಿಸಲೇಬೇಕೆಂಬ ಪ್ರಧಾನಿಗಳ ಸಂಕಲ್ಪವನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ಕೊಡಬೇಕು. ಮತ್ತೂ ಗ್ರೀನ್ ಸ್ಟೀಲ್ ತಯಾರಿಕೆಗೆ ಹೆಚ್ಚಿನ ಮಾರ್ಗೋಪಾಯಗಳನ್ನು ಕಂಡುಕೊಂಡು ಸಹಯೋಗಗಳನ್ನು ಬಲಪಡಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಲೋಹ ಶಾಸ್ತ್ರದಲ್ಲಿ ಅದರಲ್ಲಿಯೂ ಪ್ರಮುಖವಾಗಿ ಕಬ್ಬಿಣ, ಉಕ್ಕು ವಲಯದಲ್ಲಿ ಆಗುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದರು.
ಲೋಹ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಸೊಸೈಟಿ (SRTMI) ಯನ್ನು ಕೇಂದ್ರವಾಗಿ ಇರಿಸಿಕೊಂಡು ಕಾರ್ಯಪ್ರವೃತ್ತವಾಗಿದ್ದೇವೆ. CSIRO ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ ಸೇರಿದಂತೆ ಆಸ್ಟ್ರೇಲಿಯಾದ ಸಂಸ್ಥೆಗಳೊಂದಿಗೆ ಸಹಯೋಗದ ಚರ್ಚೆಗಳನ್ನು ನಡೆಸುತ್ತಿದ್ದು, ಹೈಡ್ರೋಜನ್ ಆಧಾರಿತ ಗ್ರೀನ್ ಸ್ಟೀಲ್ ಉತ್ಪಾದನೆ ಮತ್ತು ಇಂಗಾಲರಹಿತೀಕರಣದ ಕಡೆಗೆ ವ್ಯೂಹಾತ್ಮಕ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಬೃಹತ್ ಕೈಗಾರಿಕೆ ಸಚಿವಾಲಯದ ಸಭೆಯಲ್ಲಿ ಕಾರ್ಯದರ್ಶಿ ಕಮರನ್ ರಿಜ್ವಿ, ಜಂಟಿ ಕಾರ್ಯದರ್ಶಿ ಸುನೀಲ್ ಮಿತ್ತಲ್ ಹಾಗೂ ಉಕ್ಕು ಸಚಿವಾಲಯದ ಸಭೆಯಲ್ಲಿ ಹಣಕಾಸು ಸಲಹೆಗಾರರೂ ಆಗಿರುವ ಹೆಚ್ಚುವರಿ ಕಾರ್ಯದರ್ಶಿ ಅಶಿಶ್ ಚಟರ್ಜಿ, ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ ಸಭೆಯಲ್ಲಿ ಭಾಗಿಯಾಗಿದ್ದರು.