ಇತ್ತೀಚಿನ ಸುದ್ದಿ
ಹುಣಸೂರು ತಾಲೂಕಿನಲ್ಲೂ ಶುರುವಾಯ್ತು ಹುಲಿ ಕಾಟ; ಇಬ್ಬರು ರೈತರ ಮೇಲೆ ದಾಳಿ; ವ್ಯಾಘ್ರ ಸೆರೆಗೆ ಕಾರ್ಯಾಚರಣೆ ಶುರು
28/11/2025, 10:13
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಈಗ ಹುಣಸೂರಿನಲ್ಲಿ ಹುಲಿ ಕಾಟ ಶುರುವಾಗಿದ್ದು ಇಬ್ಬರು ರೈತರ ಮೇಲೆ ಹುಲಿ ದಾಳಿ ನಡೆಸಿದೆ.
ಗೌಡನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ರೈತರು ಪಾರಾಗಿದ್ದಾರೆ. ಗೌಡನಕಟ್ಟೆಯ ರೈತ ಪ್ರಕಾಶ್ ಹಾಗೂ ಸ್ವಾಮಿ ಹುಲಿ ದಾಳಿಯಿಂದ ಪಾರಾಗಿದ್ದಾರೆ. ಹುಲಿ ಘರ್ಜಿಸುತ್ತಾ ದಾಳಿಗೆ ಬಂದಾಗ ಜೋರಾಗಿ ರೈತರು ಕಿರುಚಿಕೊಂಡಿದ್ದಾರೆ.
ಅಕ್ಕ ಪಕ್ಕದಲ್ಲಿದ್ದ ರೈತರು ಸಹ ಜೋರಾಗಿ ಕೂಗಿಕೊಂಡಿದ್ದರಿಂದ ಹುಲಿ ವಾಪಸ್ಸಾಗಿದೆ. ಸದ್ಯ ಹೊಲದಲ್ಲೇ ಹುಲಿ ಮರಿಗಳ ಜೊತೆಗಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ರೈತರು ಘೇರಾವ್ ಹಾಕಿ ಹುಲಿ ಸೆರೆ ಹಿಡಿದ ನಂತರವಷ್ಟೆ ಸ್ಥಳದಿಂದ ಹೋಗವಂತೆ ತಾಕೀತು ಮಾಡಿದ್ದಾರೆ.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯಾಧಿಕಾರಿಗಳು ರಾತ್ರಿಯಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದು, 4 ಆನೆಗಳೊಂದಿಗೆ ಅರಣ್ಯ ಇಲಾಖೆಯ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ತೊಡಗಿದ್ದಾರೆ.












