ಇತ್ತೀಚಿನ ಸುದ್ದಿ
ದೇವರು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಆತಂಕಕಾರಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
18/01/2026, 21:47
ಗದಗ(reporterkarnataka.com): ದೇವರಿಗೋಸ್ಕರ ಯುದ್ದ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಹೇಳಿದರೆ ಶಾಂತಿ ಎಲ್ಲಿಂದ ಬರುತ್ತದೆ. ದೇವರು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದು ಯಾರ ಕೈಗೂ ನಿಲುಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬದುಕಿನಲ್ಲಿ ನಂಬಿಕೆ ಇರಬೇಕು ಬದುಕಿನ ಬಗ್ಗೆ ನಂಬಿಕೆ ವೀಶ್ವಾಸ ಇರಬೇಕು. ಇಂದು ಮಲಗಿ ನಾಳೆ ಏಳುತ್ತೇನೆ ಎನ್ನುವ ವಿಶ್ವಾಸ ಇರಬೇಕು. ಆದರೆ, ಅಂಧ ವಿಶ್ವಾಸ ಇರಬಾರದು. ಸೃಷ್ಟಿ ಮೇಲೆ, ಬದುಕಿನ ಮೇಲೆ ವಿಶ್ವಾಸ ಇಡುವುದು ಆಧ್ಯಾತ್ಮ ಅಂಧ ವಿಶ್ವಾಸವನ್ನು ತರ್ಕ ಬದ್ದವಾಗಿ ಚಿಂತನೆ ಮಾಡುವುದೆ ಜ್ಞಾನ. ವಿಶ್ವಾಸ ಮತ್ರು ಅಂಧ ವಿಶ್ವಾಸದ ನಡುವೆ ಇರುವುದೆ ಜ್ಞಾನ. ನಮಗೆ ಬುದ್ದಿ ಕೊಟ್ಟಿದ್ದಾರೆ ಅದು ಕಂಪ್ಯೂಟರ್ ಪ್ರೊಸೆಸ್ಸಿಂಗ್ ರೀತಿ ಸತ್ಯಾ ಸತ್ಯ ಗುರುತಿಸಿ ವಿಂಗಡಿಸುವುದೇ ಜ್ಞಾನ ಎಂದು ಹೇಳಿದರು.
*ಪವಾಡಗಳ ಬಗ್ಗೆ ಅರಿವು ಮುಖ್ಯ:*
ಪವಾಡಗಳ ಬಗ್ಗೆ ಬಹಳ ಚರ್ಚೆಯಾಗುತ್ತದೆ. ಸ್ವಾಮೀಜಿ ಜಾದು ಮಾಡ್ತಾರೆ, ಉಂಗುರು ಕೊಡ್ತಾರೆ ಅಂತ ಹೇಳುತ್ತಾರೆ. ಅದು ಕಣ್ ಕಟ್ ಅಂತಾರೆ. ವಿಜ್ಞಾನ ಏನು ಹೇಳುತ್ತದೆ ಅಂದರೆ ಒಂದು ವಸ್ತು ಸಿದ್ದವಾಗಲು ಹಲವಾರು ವಿಧಿ ವಿಧಾನ ಇದೆ. ಅದರ ಮೂಲಕ ವಸ್ತು ಉತ್ಪತ್ತಿ ಆಗುತ್ತದೆ. ಆದರೆ, ಪವಾಡ ಇಲ್ಲ ಅಂತ ಅಲ್ಲಾ ದಿನ ನಿತ್ಯ ನಡೆಯುವ ಪವಾಡದ ಬಗ್ಗೆ ನಮ್ಮ ಗಮನ ಇಲ್ಲ. ನಮ್ಮ ರೈತ ಒಂದು ಕಾಳು ಬಿತ್ತಿದರೆ ನೂರಾರು ಕಾಳು ಬರುತ್ತವೆ ಅದು ಪವಾಡ ಅಲ್ಲವೇ ? ಅದಕ್ಕಿಂತ ದೊಡ್ಡ ಪವಾಡ ಯಾವುದಿದೆ. ಆಕಾಶದಿಂದ ಒಂದು ಹನಿ ನೀರು ಭೂಮಿಗೆ ಬಂದಾಗ ನದಿಯಾಗಿ ಪ್ರವಾಹ ಆಗುತ್ತದೆ ಅದು ಪವಾಡ ಅಲ್ಲವೇ ? ಒಂಭತ್ತು ತಿಂಗಳು ತಾಯಿ ಗರ್ಭದಲ್ಲಿ ಬೆಳೆದು ಅಲ್ಲಿ ಜೀವಂತವಾಗಿದ್ದು, ಹುಟ್ಟಿದ ಮೇಲೂ ಅದೇ ಜೀವನ ಮುಂದುವರೆಸುವುದು ಪವಾಡ ಅಲ್ಲವೇ ? ನಾವು ಹಲವಾರು ಸರಿ ಉಸಿರಾಡುತ್ತೇವೆ. ಅದರ ಬಗ್ಗೆ ಜ್ಞಾನ ಇಲ್ಲ. ಅದು ಪವಾಡ ಅಲ್ಲವೇ ? ನಮ್ಮ ಒಳಗಡೆ ನಡೆಯುವ ಪವಾಡದ ಬಗ್ಗೆ ಅರಿವು ಮೂಡಿದರೆ ಮನುಷ್ಯನ ಬದುಕು ಎಷ್ಟು ಶ್ರೇಷ್ಟ ಅಂತ ಅರಿವು ಮೂಡುತ್ತದೆ. ಇದೆಲ್ಲ ಸೃಷ್ಟಿ ಮಾಡಿರುವ ಸೃಷ್ಠಿ ಕರ್ತ ಯಾವ ರೀತಿ ಇರಬೇಕು, ಇದರ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.
*ಜ್ಞಾನ ಮುಖ್ಯ:*
ಮನುಷ್ಯನಿಗೆ ಜ್ಞಾನ ಮುಖ್ಯ ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ಕೃತಕ ಜ್ಞಾನ, ಮನುಷ್ಯನ ಸ್ವಭಾವ ಏನೆಂದರೆ ಇನ್ನೊಬ್ಬರಿಗೆ ಕೆಲಸ ಕೊಡುವುದು. ನಮ್ಮ ಬದಲಿ ಇನ್ನೊಬ್ಬರು ಊಟ ಮಾಡಿದಾಗ ಹಸಿವು ನೀಗಿದ್ದರೆ ಅದನ್ನು ಇನ್ನೊಬ್ಬರಿಗೆ ಕೊಡುತ್ತ ಇದ್ದೆವು. ಈಗ ಎಲ್ಲವನ್ಬು ಔಟ್ ಸೋರ್ಸಿಂಗ್ ಮಾಡುವ ವ್ಯವಸ್ಥೆಯಲ್ಲಿದ್ದೆವೆ. ಇದರಿಂದ ನಮ್ಮ ಧರ್ಮ, ನ್ಯಾಯ ನೀತಿ ಔಟ್ಸೋರ್ಸ್ ಆಗುತ್ತಿದೆ. ಇಲ್ಲೆ ಆಪತ್ತು ಬಂದಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನಡುವೆ ಅಂತಕರಣ ಮರೆತಿದ್ದೇವೆ ಅದನ್ನು ಬಿಟ್ಟು ಶಿಕ್ಷಣ ಕಲಿತರೆ ಅರ್ಥ ಇಲ್ಲ. ನಮ್ಮ ಸಂಸ್ಕೃತಿ ಪರಂಪರೆ ಬಹಳ ಮುಖ್ಯ. ಅಂತಕರಣ ಬಿಟ್ಟು ಶಿಕ್ಷಣ ಕಲಿಯಲು ಸಾಧ್ಯ ವಿಲ್ಲ. ಮಾನವೀಯ ಗುಣ ಡಿಎನ್ ಎ ನಲ್ಲಿ ಬರಬೆಕಾದರೆ ಮನುಷ್ಯನನ್ನು ಮನುಷ್ಯನಾಗಿ ನೋಡುವಂತೆ ಎಲ್ಲ ವಿಚಾರಧಾರೆ ಹೇಳಿದರು ಬೇರೆ ಬೇರೆ ರೀತಿಯಲ್ಲಿ ಹೇಳಿವೆ. ಕೆಲವು ವಿಚಾರಧಾರೆ ನೀನು ಹುಟ್ಡಿದ್ದೆ ಯುದ್ದ ಮಾಡಲು ದೇವರಿಗೋಸ್ಕರ ಯುದ್ದ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಹೇಳಿದರೆ ಶಾಂತಿ ಎಲ್ಲಿಂದ ಬರುತ್ತದೆ. ದೇವರು ಧರ್ಮದ ಹೆಸರಿನಲ್ಲಿ ಬಯೋತ್ಪಾದನೆ ನಡೆಯುತ್ತಿದೆ. ಇದೆ ಅದು ಆತಂಕಕ್ಕೆ ಕಾರಣವಾಗಿದೆ . ಅದು ಯಾರ ಕೈಗೂ ನಿಲುಕುವುದಿಲ್ಲ ಎಂದು ಹೇಳಿದರು.
*ಮಾನವೀಯತೆ ಮುಖ್ಯ:*
ಮುಂಡರಗಿ ಮಠಕ್ಕೆ ನೂರು ವರ್ಷ ಆಯಿತು. ಯಾರು ಇಲ್ಲದಾಗ ಜ್ಞಾನ ಧ್ಯಾನ ಕೊಡುವ ಕೆಲಸ ಎಲ್ಲ ಸ್ವಾಮೀಜಿಗಳು ಮಾಡಿದ್ದಾರೆ. ಈ ಮಠ ಈ ಭಾಗದ ಜನರಿಗೆ ಕಾಯಕಲ್ಪ ಕಲ್ಪವೃಕ್ಷವಾಗಿ ಬೆಳೆದಿದೆ. ಈಗಿನ ಸ್ವಾಮೀಜಿ ಬಹಳ ಅದ್ಬುತವಾಗಿ ನಡೆಸಿಕೊಂಡು ಬಂದಿದ್ದಾರೆ. ಬಿಲ್ಬಗೇಟ್ಸ್ ಸೇರಿದಂತೆ ಹಲವಾರು ಜನರು ಸಾಧನೆ ಮಾಡಿರುವ ಬಗ್ಗೆ ಹೇಳಿದ್ದಾರೆ. ಸ್ವಾಮೀಜಿಗಳದ್ದು ದೊಡ್ಡ ಪವಾಡ ಅವರು ಏಳನೇಯತ್ತೆ ಪಾಸಾಗಿದ್ದಾರೆ. ಆದರೆ, ಅವರು ಬರೆದಿರುವ ವಿಚಾರ ಅವರು ತಿಳಿದಿರುವ ಜ್ಞಾನದ ಬಗ್ಗೆ ಮೈಸೂರು ಸುತ್ತೂರು ಮಠದ ಸ್ವಾಮಿಜಿ ಮಾತನಾಡಿದರು ಇವರ ಬಗ್ಗೆ ಅವರಿಗೆ ಗೊತ್ತಿದೆ. ಸ್ವಾಮೀಜಿ ಬಗ್ಗೆ ನಾವೇ ಹೇಳಬೇಕು.
ಗುರು ಮತ್ತು ಶಿಷ್ಯರ ಸಂಬಂಧ ಮುಖ್ಯ ಗುರುಕುಲ ಕಾಲದಲ್ಲಿ ಒಬ್ಬ ಶ್ರೀಮಂತ ತನ್ನ ಮಗ ರ್ಯಾಂಕ್ ಬರಬೆಕೆಂದು ಹೇಳಿದರು ಆತ ಎಲ್ಲದರಲ್ಲೂ ನಂಬರ್ ಒನ್ ಬಂದ. ಹಿಂದೆ ಗೌಡರ ಮಕ್ಕಳು ಮುಲ್ಕಿ ಪಾಸ್ ಆದರೆ ಮೆರವಣಿಗೆ ಮಾಡುತ್ತಿದ್ದರು. ಶ್ರೀಮಂತನ ಮಗನಿಗೆ ಆನೆ ಮೇಲೆ ಮೆರವಣಿಗೆ ಮಾಡಿದರು ಅದನ್ನು ಅವರ ಅಪ್ಪ ನೋಡಿದ ಆತನಿಗೆ ಖುಷಿ ಆಗಲಿಲ್ಲ, ಅದನ್ನು ಮಗ ಪ್ರಶ್ನಿಸಿದ ಅವನಿಗೆ ಗುರುಗಳು ನಿನಗೆ ಇನ್ನೇನೊ ಕಲಿಸಬೆಕಿತ್ತು ಅಂತ ಹೇಳಿದ ಆತ ಹೋಗಿ ಗುರುಗಳ ಬಳಿ ಹೇಳಿದ, ಗುರುಗಳು ಆತನನ್ನು ಕಾಡಿಗೆ ಕಳಿಸಿದರು. ಆತ ಅರಣ್ಯಕ್ಕೆ ಹೋದ ಎಲ್ಲವನ್ನೂ ಮರೆತ, ಸುಮಾರು ಎರಡುವರೆ ವರ್ಷ ಧ್ಯಾನ ಮಾಡಿ ಧ್ಯಾನಿ ಆದ, ಆ ಮೇಲೆ ಬಂದು ಗುರುಗಳಿಗೆ ನಮಸ್ಕಾರ ಮಾಡಿದ ರ್ಯಾಂಕ್ ಗಿಂತ ಮಾನವಿಯತೆ ಕಲಿಯುವುದು ಬಹಳ ಮುಖ್ಯ ಅಂತ ಹೇಳಿದ ಎಂದರು.
*ಕಲಿಕೆ ನಿರಂತರ:*
ಒಮ್ಮೆ ವಿದ್ಯಾರ್ಥಿ ಆದರೆ ಕೊನೆವರೆಗೂ ವಿದ್ಯಾರ್ಥಿ. ಶಾಲೆಯಲ್ಲಿ ಮೊದಲು ಪಾಠ ಹೇಳಿದ ನಂತರ ಪರೀಕ್ಷೆ ಬರೆಯುತ್ತೇವೆ. ಬದುಕಿನಲ್ಲಿ ಮೊದಲು ಪರೀಕ್ಷೆ ಆ ಮೇಲೆ ಪಾಠ ಕಲಿಯುತ್ತೇವೆ. ಹೀಗಾಗಿ ಕಲಿಯುವುದು ನಿರಂತರವಾಗಿರುತ್ತದೆ. ಶ್ರೀಮಠದ ಆಶ್ರಯದಲ್ಲಿ ನೀವು ಕಲಿಯುತ್ತಿರುವುದು ಅದೃಷ್ಟವಂತರು. ಕರ್ನಾಟಕದಲ್ಲಿ ಮಠಗಳು ವಿದ್ಯೆ ಅನ್ನದಾನ ಅಷ್ಡೇ ಅಲ್ಲ ವಸತಿ ಸಂಸ್ಕಾರ ಕೊಟ್ಟು ಅವರಿಗೆ ಸಂಪೂರ್ಣತೆಗೆ ತೆಗೆದುಕೊಂಡು ಹೋಗುತ್ತವೆ. ಯಶಸ್ಸು ಬಹಳ ಸಣ್ಣ ವಿಚಾರ ಒಂದು ಹಂತದಿಂದ ಇನ್ನೊಂದು ಹಂತ ಹೋಗಬೇಕು ಒಂದು ಯಶಸ್ಸು ಇನ್ನೊಂದು ಯಶಸ್ಸಿಗೆ ಸ್ಪೂರ್ತಿ ಕೊಡುತ್ತದೆ. ನಿಮ್ಮ ಯಶಸ್ಸು ಇನ್ನೊಬ್ಬರಿಗೆ ಅನುಕೂಲ ಅದರೆ ಅದು ಸಾಧನೆ. ಇತರರಿಗಾಗಿ ನಮ್ಮ ಜ್ಞಾನ ಇದ್ದರೆ ಅದು ಸಾಧನೆ. ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರ ಬದುಕುವವನು ಸಾಧಕ. ಇಲ್ಲಿನ ಎಲ್ಲ ಹಿರಿಯ ಸ್ವಾಮಿಜಿಗಳನ್ನು ಅವರು ಮಾಡಿರುವ ಸಾಧನೆಯಿಂದ ನೆನಪಿಸಿಕೊಳ್ಳುತ್ತೇವೆ. ಬುದ್ದ, ಬಸವ, ಅಂಬೇಡ್ಕರ ಅವರನ್ನು ಅವರ ಸಾಧನೆಯಿಂದ ನೆನಪಿಸಿಕೊಳ್ಳುತ್ತೇವೆ. ನೀವು ವಿದ್ಯಾವಂತರಾಗಿ ಈ ಮಠವನ್ನು, ಶಾಲೆಯನ್ನು ಎಂದೂ ಮರೆಯಬಾರದು. ಇದು ಸರಸ್ವತಿ ವಾಹನ ಪರಮಹಂಸ. ಅದು ಬಹಳ ಶುಭ್ರ, ಮಾನಸ ಸರೋವರಕ್ಕೆ ಹೋದರೆ ಅಲ್ಲಿ ಪರಮಹಂಸ ಇರುತ್ತವೆ. ನೀವು ಎತ್ತರಕ್ಕೆ ಬೆಳೆದು ದೇಶ ಬೆಳೆಸಬೇಕು. ಸಮಾಜ ಬೆಳೆಸಬೇಕು. ಅದೇ ಪವಾಡ ಎಂದು ಹೇಳಿದರು.



ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ, ಮುಂಡರಗಿ, ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ರಾಮಕೃಷ್ಣ – ವಿವೇಕಾನಂದ ಆಶ್ರಮ ಗದಗ, ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮುಂಡರಗಿ ಶ್ರೀಗಳವರು ಸಾನಿಧ್ಯ ವಹಿಸಿದ್ದರು. ಶಾಸಕರಾದ ಡಾ ಚಂದ್ರು ಲಮಾಣಿ, ಮಾಜಿ ಸಚಿವರಾದ ಎಸ್.ಎಸ್ ಪಾಟೀಲ್, ಸಂಸದರಾದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಮುಖಂಡರಾದ ಕರಬಸಪ್ಪ ಹಂಚಿನಾಳ ಸೇರಿದಂತೆ ಹಲವಾರು ಪ್ರಮುಖರಯ ಉಪಸ್ಥಿತರಿದ್ದರು.












