ಇತ್ತೀಚಿನ ಸುದ್ದಿ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ತಮಿಳುನಾಡು ವಿದ್ಯಾರ್ಥಿ ದಾರುಣ ಸಾವು
14/03/2026, 14:46
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಮಿಳುನಾಡು ಮೂಲದ ವಿದ್ಯಾರ್ಥಿಯೋರ್ವ ಉಸಿರು ಚೆಲ್ಲಿರುವ ಘಟನೆ ಇಂದು ಬೆಳಿಗ್ಗೆ ಹೇರೂರುವಿನಲ್ಲಿ ನಡೆದಿದೆ.
ತಮಿಳುನಾಡು ರಾಜ್ಯದ ನಿವಾಸಿ ಪ್ರಸ್ತುತ ಬೆಂಗಳೂರು ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ (22) ಮೃತ ದುರ್ದೈವಿ.
ಕಾಲೇಜಿನ ತಂಡ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದು, ಇಂದು ಬೆಳಿಗ್ಗೆ ಹೇರೂರಿನಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ವೀಕ್ಷಣೆಗೆ ತೆರಳಿತ್ತು.
ಈ ತಂಡದ ಪೈಕಿ ಸುದರ್ಶನ್ ನೀರಿಗೆ ಇಳಿದಿದ್ದಾನೆ. ನಂತರ ಮೇಲಕ್ಕೆ ಬರಲಾಗದೆ ದುರಂತ ಸಾವಿಗೀಡಾಗಿದ್ದಾನೆ.
ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಮುಳುಗು ತಜ್ಞರಿಂದ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು.












