ಇತ್ತೀಚಿನ ಸುದ್ದಿ
Sports | ಮಂಗಳೂರು: ಅ. 28ರಿಂದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆ; ಮೊದಲ ಬಾರಿಗೆ ವಿಶ್ವದರ್ಜೆಯ ಕ್ರೀಡಾ ಕೂಟ
02/08/2025, 20:23

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ದೇಶ ವಿದೇಶದ ನೂರಾರು ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಭಾಗವಹಿಸಲಿರುವ “ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025” ಬ್ಯಾಡ್ಮಿಂಟನ್ ಸ್ಪರ್ಧೆ ನಗರದ ಉರ್ವದ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 2 ರವರೆಗೆ ನಡೆಯಲಿದೆ.
ಬ್ಯಾಡ್ಮಿಂಟನ್ ಅಸೋಸಿಯೇಶನ್ ನೇತೃತ್ವದಲ್ಲಿ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಕ್ರೀಡಾ ಕೂಟ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶ ವಿದೇಶದ 350ಕ್ಕೂ ಅಧಿಕ ಬ್ಯಾಡ್ಮಿಂಟನ್ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಅಷ್ಟೇ ಪ್ರಮಾಣದ ರೆಫ್ರಿಗಳು, ಸಿಬ್ಬಂದಿ ಭಾಗವಹಿಸಲಿದ್ದಾರೆ. ಸುಮಾರು 25 ಲಕ್ಷ ರೂ.ಗಳಷ್ಟು ಬಹುಮಾನ ಮೊತ್ತ ಇರಲಿದೆ. ವಸತಿ, ಊಟ ಸಹಿತ ಎಲ್ಲಾ ಸೌಕರ್ಯವನ್ನು ನಡೆಸಲಾಗುವುದು. ಸುಮಾರು 2 ಕೋ.ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದರು.
ಕಳೆದ ವರ್ಷ ಛತ್ತೀಸ್ ಗಢದಲ್ಲಿ ಈ ಸ್ಪರ್ಧೆ ನಡೆದಿತ್ತು. ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ ಅಗ್ರಕ್ರಮಾಂಕದಲ್ಲಿ ಇರುವವರು ಇದರಲ್ಲಿ ಭಾಗವಹಿಸಲಿದ್ದಾರೆ. ಆನ್ ಲೈನ್ ನೋಂದಣಿಗೆ ಆದ್ಯತೆ ನೀಡಲಾಗಿದೆ. ಕರಾವಳಿ ಜಿಲ್ಲೆಯ ಪ್ರಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಆರೋಗ್ಯ, ಭದ್ರತೆ, ಊಟೋಪಚಾರ, ವಸತಿ ಸಹಿತ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದು. ಸರಕಾರದಿಂದ ಪೂರ್ಣ ಸಹಕಾರದ ನಿರೀಕ್ಷೆ ಇದೆ ಹಾಗೂ ವಿವಿಧ ಪ್ರತಿಷ್ಠಿತ ಕಂಪೆನಿಗಳ ಸಹಕಾರವೂ ಇರುತ್ತದೆ. ಈ ಮೂಲಕ ಮಂಗಳೂರಿನ ಹೆಸರು ದೇಶ ವಿದೇಶದಲ್ಲಿ ಕಂಗೊಳಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬ್ಯಾಡ್ಮಿಂಟನ್ ಕಾರ್ಯದರ್ಶಿ ರಾಜೇಶ್ ಪೂರಕ ಮಾಹಿತಿ ನೀಡಿದರು. ಪ್ರಮುಖರಾದ ಅಶೋಕ್, ಕೃಷ್ಣಮೂರ್ತಿ, ಸುಧಾಕರ್, ಸುಪ್ರಿತ್ ಆಳ್ವ., ಲಕ್ಷ್ಮಿ ಪಿ.ಸುವರ್ಣ, ಅಶೋಕ್ ಹೆಗ್ಡೆ, ದೀಪಕ್ ಕುಮಾರ್, ಡಾ. ಶರತ್, ಸೂರಜ್ ಆಳ್ವ , ರಿಯಾಜ್ ಹಸನ್ ಉಪಸ್ಥಿತರಿದ್ದರು.