ಇತ್ತೀಚಿನ ಸುದ್ದಿ
ಸೌಜನ್ಯ ಪ್ರಕರಣದ ಕುರಿತು ನಮ್ಮ ಹೋರಾಟ ನಿಲ್ಲದು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
23/06/2023, 21:15

ಮಂಗಳೂರು(reporterkarnataka.com): ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಕುರಿತು ನಮ್ಮ ಹೋರಾಟ ನಿಲ್ಲುವುದಿಲ್ಲ. ಸೌಜನ್ಯ ಒಂದು ಶಕ್ತಿಯಾದ್ದರಿಂದ ಬಂಧಿತನಾಗಿದ್ದ ಸಂತೋಷ್ ನಿರಪರಾಧಿ ಎಂದು ಸಾಬೀತಾಗಿದೆ. ಹಾಗಾಗಿ 11 ವರ್ಷಗಳಿಂದ ಪ್ರಕರಣ ಜೀವಂತವಾಗಿದೆ ಎಂದು
ಪ್ರಜಾಪ್ರಭುತ್ಚ ವೇದಿಕೆ ಬೆಳ್ತಂಗಡಿ ಇದರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಬಂಧಿತನಾಗಿದ್ದ ಸಂತೋಷ್ ನಿರಾಪರಾಧಿಯೆಂದು
ನ್ಯಾಯಾಲಯದಲ್ಲಿ ಸಾಬೀತಾಗಿದೆ. ಸಂತೋಷ್ ಆರೋಪಿಯಲ್ಲದಿದ್ದರೆ ನಿಜವಾದ ಆರೋಪಿ ಯಾರು ಎಂದು ನಗರದ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು ಪ್ರಶ್ನಿಸಿದರು.
ಸೌಜನ್ಯ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ, ಆದ್ದರಿಂದ ನಾವು ಸಾಮಾಜಿಕ ನ್ಯಾಯದ ಮೊರೆ ಹೋಗುತ್ತೇವೆ. ಸೌಜನ್ಯಳ ಮನೆಯ ಮುಂದೆ ಸೌಜನ್ಯಳ ಬೃಹತ್ ಪ್ರತಿಮೆಯನ್ನು ನಿರ್ಮಿಸುತ್ತೇವೆ. ಮನೆಯವರು ಕೆಲವು ಆರೋಪಿಗಳ ಹೆಸರು ಹೇಳಿದರೂ ಕೂಡ ಅವರನ್ನು ಬಂಧಿಸದೇ ಬಡಪಾಯಿ ಸಂತೋಷ್ನನ್ನು ಬಂಧಿಸಿ ಅವನ ಜೀವನವನ್ನು ಹಾಳು ಮಾಡಲಾಗಿದೆ. ನಮಗೆ ಅಣ್ಣಪ್ಪ ಮಂಜುನಾಥನೇ ನ್ಯಾಯ ತೀರ್ಮಾನ ಮಾಡುತ್ತಾನೆ. ಯಾರು ಸೌಜನ್ಯಳನ್ನು ಅತ್ಯಾಚಾರ ಮಾಡಿದ್ರು ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲರ ಕುಟುಂಬ, ಸಂತಾನ ನಾಶ ಆಗುತ್ತದೆ. ನಾನು ಈ ಪ್ರಕರಣದಲ್ಲಿ ಸೇರಿದ್ರೆ ನನ್ನ ಕುಟುಂಬವೂ ನಾಶವಾಗಲಿ ಎಂದು ಆಕ್ರೋಶದಿಂದ ನುಡಿದರು.
ನಾವು ಆರೋಪ ಮಾಡುವವರು ತಪ್ಪು ಮಾಡದೇ ಇದ್ದರೆ ಅಣ್ಣಪ್ಪ , ಮಂಜುನಾಥನ ಎದುರು ಬಂದು ಆಣೆ ಪ್ರಮಾಣ ಮಾಡಲಿ, ನಾವು ಕೂಡ ಬರುತ್ತೇವೆ ಅವರು ತಪ್ಪು ಮಾಡಿದ್ದಾರೆ ಎಂದು ನಾವು ಆಣೆ ಪ್ರಮಾಣ ಮಾಡುತ್ತೇವೆ. ಸೌಜನ್ಯಳ ಮನೆಯವರ ನೋವು ಅವರಿಗೆ ಮುಟ್ಟಬೇಕು. ಸೌಜನ್ಯಳ ಚೀರಾಟ, ಕೂಗಾಟ ತಪ್ಪು ಮಾಡಿದವರ ಮನೆಯಲ್ಲಿಯೂ ಕೇಳಬೇಕು ಎಂದರು.
ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರವಿ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ, ವಾರಿಜಾ ಪೂಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು, ಬಾಲಕೃಷ್ಣ ಗೌಡ ಸಾವನ್ನಪ್ದಿದ್ದರು. ಎಲ್ಲಾ ಸಾಕ್ಷಿಗಳು ಹೀಗೆ ಸಾವನ್ಪಪ್ಪಲು ಕಾರಣ ಯಾರು ಎಂದು ಅವರು
ಪ್ರಶ್ನಿಸಿದರು.
ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಹಲವು ಅನುಮಾನಗಳಿವೆ. ಸೌಜನ್ಯ ಪ್ರಯಾಣಿಸಿದ ಬಸ್ನಲ್ಲಿದ್ದವರನ್ನು ತನಿಖೆ ನಡೆಸಿಲ್ಲ, ಆಕೆಯ ಕೈಯಲ್ಲಿದ್ದ ಛತ್ರಿಯನ್ನು ಪತ್ತೆ ಹಚ್ಚಿಲ್ಲ. ಹೀಗೆ ಹಲವು ಅನುಮಾನಗಳನ್ನು ಅವರು ವ್ಯಕ್ತಪಡಿಸಿದರು.
ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ನಾನು ಮಾಹಿತಿ ಸಿಕ್ಕಿ ಒಂದು ತಿಂಗಳು ಬೆಳ್ತಂಗಡಿ ಬಿಟ್ಟು ಹೋಗಿದ್ದೆ. ಅ ಸಮಯದಲ್ಲಿ ಎಲ್ಲಾ ಸಾಕ್ಷಿಗಳನ್ನು ಮುಗಿಸಿದ್ದಾರೆ. ನಿರಪರಾಯಾದ ಸಂತೋಷ್ ಮನೆಯವರು ಕಣ್ಣೀರುಡುತ್ತಿದ್ದಾರೆ, ಅವರು ನಾಲ್ಕು ಜನ ಮಕ್ಕಳು. ಆತನ ಇಬ್ಬರು ಸಹೋದರರಿಗೆ ಮದುವೆ ನಿಶ್ಚಯವಾಗಿತ್ತು. ಕೇಸಿನ ಸುದ್ದಿಯಾದ ಕಾರಣ ಮದುವೆ ಕ್ಯಾನ್ಸಲ್ ಆಗಿದೆ. ಸಂತೋಷ್ ತಾಯಿ ಇದೇ ಕೊರಗಿನಲ್ಲಿ ಸಾವನ್ನಪ್ಪಿದ್ದಾರೆ ಎಂದರು.
ಸೌಜನ್ಯ ಪರ ವಕೀಲೆ ಅಂಬಿಕಾ ಪ್ರಭು ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ಮುಂದೆ ಯಾವ ರೀತಿ ಹೋಗಬೇಕು ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪೊಲೀಸ್ ಮತ್ತು ಡಾಕ್ಟರ್ಸ್ ಈ ಪ್ರಕರಣ ಮುಚ್ಚಿ ಹಾಕಿಸಿ ಅನ್ಯಾಯ ಮಾಡಿದ್ದಾರೆ ಅವರ ವಿರುದ್ದ ಹ್ಯೂಮನ್ ರಿಸೋರ್ಸ್ ಕಮಿಷನ್ಗೆ ದೂರು ನೀಡುತ್ತೇವೆ. ಸುಪ್ರೀಂಕೋರ್ಟ್ಗೆ ಹೋಗಲು ನಮಗೆ ಸರ್ಕಾರದ ಸಹಾಯ ಬೇಕು. ಮುಂದಿನ ದಿನದಲ್ಲಿ ಮನವಿ ಮಾಡುತ್ತೇವೆ. ಸರ್ಕಾರದಿಂದ ಸಹಾಯ ಸಿಕ್ಕರೆ ಸುಪ್ರೀಂಕೋರ್ಟ್ ಹೋಗುತ್ತೇವೆ ಎಂದರು.
ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳಿಗೆ ನ್ಯಾಯ ಸಿಗಬೇಕು, ಇವತ್ತು ನಾವು ಗೌಡ ಸಮುದಾಯದವರಾದರೂ ನಮ್ಮ ಸಮುದಾಯದ ಸ್ವಾಮೀಜಿಗಳು ಯಾಕೆ ನಮ್ಮ ಪರವಾಗಿ ಮಾತನಾಡುವುದಿಲ್ಲ ಎಂದು ಕಣ್ಣೀರಿಟ್ಟರು. ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಸೌಜನ್ಯ ಮಾವ ವಿಠಲ ಗೌಡ ಉಪಸ್ಥಿತರಿದ್ದರು.