ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ, ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗರಂ: ಹಾಗಾದರೆ ಅವರೇನು ಹೇಳಿದ್ರು ಕೇಳೋಣ
27/01/2023, 21:14

ಉಡುಪಿ(reporterkarnataka.com): ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಬರಬಹುದು, ಆದರೆ ಕಾಂಗ್ರೆಸ್ನಿಂದ ಬೇರೆ ಪಕ್ಷಕ್ಕೆ ಹೋಗಬಾರದೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ತಿರುಗೇಟು ನೀಡಿದ್ದಾರೆ.
ಮಧ್ವರಾಜ್ ಅವರು ಎಲ್ಲೇ ನಿಂತರೂ ಅವರನ್ನು ಸೋಲಿಸಿ ಎಂದು ಉಭಯ ನಾಯಕರು ಕರೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ವಾಗ್ದಾಳಿ ನಡೆಸಿದರು.
ಲಂಚದ ಹಣದಿಂದ ಪಕ್ಷವನ್ನು ಕಟ್ಟಲಿಲ್ಲ. ನಮ್ಮ ಕುಟುಂಬದ ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲಾಗಿತ್ತು. ಸ್ವಜನ ಪಕ್ಷಪಾತವನ್ನು ಮಾಡಿಲ್ಲ ಎಂದು ಮಾಜಿ ಸಚಿವರು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರು ಕರ್ನಾಟಕ ರೈತ ಸಂಘ, ಭಾರತೀಯ ಲೋಕದಳ, ಸಮಾಜವಾದಿ ಜನತಾಪಕ್ಷ, ಜನತಾದಳ, ಜೆಡಿಎಸ್ ಮತ್ತು ಕಾಂಗ್ರೆಸ್ ಹೀಗೆ ಐದಾರು ಪಕ್ಷ ಬದಲಿಸಿದ್ದಾರೆ. ಜೆಡಿಎಸ್ ನಿಂದ ಉಪಮುಖ್ಯಮಂತ್ರಿಯಾಗಿದ್ದರೂ ಆ ಪಕ್ಷಕ್ಕೆ ನಿಷ್ಠೆ ತೊರಲಿಲ್ಲ. ಅವರು ಪಕ್ಷಾಂತರದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು.
ಜ.22ರಂದು ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನನ್ನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿರುವ ಸಿದ್ದರಾಮಯ್ಯ ಅವರ ಸಂಸ್ಕಾರ, ಸೌಜನ್ಯ ಏನೆಂಬುದು ತಿಳಿಯುತ್ತದೆ. ಅವರ ಭಾಷೆಯಲ್ಲಿ ಉತ್ತರ ನೀಡಬಹುದು. ಆದರೆ, ನಾವಷ್ಟು ಸಂಸ್ಕಾರ ಹೀನರಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದರು ಎಂದರು.
ತಂದೆ ಮಲ್ಪೆ ಮಧ್ವರಾಜ್ ಅವರು ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷ ಕಟ್ಟಿದ್ದರು. ತಾಯಿ ಮನೋರಮ್ಮ ಮಧ್ವರಾಜ್ ಅವರ ಪ್ರಾಮಾಣಿಕತೆ, ಕಾರ್ಯಬದ್ಧತೆಗೆ ಪಕ್ಷ ಟಿಕೆಟ್ ನೀಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದ ಸಂದರ್ಭದಲ್ಲಿ ಪಕ್ಷ ಬೆಳೆಸುವ ಕಾರ್ಯವನ್ನು ಮಾಡಿದ್ದೇನೆ. ಈಗ ಕಾಂಗ್ರೆಸ್ ದೊಡ್ಡ ಭ್ರಮೆಯಲ್ಲಿದೆ. ಟಿಕೆಟ್ ಹಂಚಿಕೆ ಆರಂಭವಾಗುತ್ತಿದ್ದಂತೆ ಅವರಲ್ಲಿ ಒಳಜಗಳ ಹೆಚ್ಚಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ರಾಜ್ಯದಲ್ಲಿ 150 ಸೀಟುಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.