ಇತ್ತೀಚಿನ ಸುದ್ದಿ
ಸರಕಾರದಿಂದ ಹಸಿರು ಪೀಠಕ್ಕೆ ಅಪಿಡವಿಟ್: ಕಸ್ತೂರಿರಂಗನ್ ವರದಿ ವಿರೋಧಿಸಿ ಕೆಜಿಎಫ್ ನೀಡಿದ್ದ ಬಂದ್ ವಾಪಸ್
25/07/2022, 16:05
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಿನ ಜನಜೀವನದ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಹೋರಾಟ ಸಮಿತಿ ನೀಡಿದ್ದ ಜಿಲ್ಲಾ ಬಂದ್ ಅನ್ನು ವಾಪಾಸ್ ಪಡೆಯಲಾಗಿದೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ 26 ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳು ಸೂಕ್ಷ್ಮ ವಲಯ ವ್ಯಾಪ್ತಿಗೆ ಒಪಡಿಸಲಾಗಿದ್ದು, ಇದರಿಂದ ಮಲೆನಾಡಿನ ಜನ ಜೀವನದ ಬಗ್ಗೆ ಅತೀವ ಪರಿಣಾಮ ಬೀರಿದ್ದು ಕಸ್ತೂರಿರಂಗನ್ ವರದಿಯಿಂದ ಕಾಫಿ, ಅಡಿಕೆ, ಏಲಕ್ಕಿ, ಕಾಳುಮೆಣಸು ಬೆಳೆಗಾರರ ಬಡ ರೈತರ ಕೂಲಿ ಕಾರ್ಮಿಕರ ಅನ್ನದ ಬಟ್ಟಲನ್ನು ಕಸಿದು ಕೊಳ್ಳಲು ಮುಂದಾಗಿದೆ. ಇದರಿಂದ ಕೆಜಿಎಫ್ ಹಾಗೂ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯು ಜುಲೈ 29 ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿತ್ತು .ಇದನ್ನರಿತ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ತರದಂತೆ ತಡೆಯಲು ಸಭೆ ನಡೆಸಿ ಮುಖ್ಯಮಂತ್ರಿಗಳ ನಿಯೋಗವು ದಿಲ್ಲಿಯ ಪರಿಸರ ಇಲಾಖೆ ಮುಖಾಂತರ ಹಸಿರು ಪೀಠಕ್ಕೆ ಅಪಿಡವಿಟ್ ಸಲ್ಲಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕೆಜಿಎಫ್ ಹಾಗೂ ಹೋರಾಟ ಸಮಿತಿಯು ಸ್ವಾಗತಿಸಿದೆ. ಇದರಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯಬೇಕಾಗಿದ್ದ ಚಿಕ್ಕಮಗಳೂರು ಜಿಲ್ಲಾ ಬಂದ್ ಅನ್ನು ತಾತ್ಕಾಲಿಕವಾಗಿ ಸದ್ಯಕ್ಕೆ ಹಿಂಪಡೆದಿದ್ದೇವೆ. ಕಸ್ತೂರಿರಂಗನ್ ವರದಿ ವಿರೋಧಿಸಿ ಹೋರಾಟಗಳು ಜಯ ಸಿಗುವವರೆಗೂ ಮುಂದುವರೆಯುತ್ತವೆ’ ಎಂದರು.














