ಇತ್ತೀಚಿನ ಸುದ್ದಿ
ರಿಕ್ಷಾ ಸ್ಫೋಟ ಪ್ರಕರಣ; ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಬಿಜೆಪಿಯಿಂದ 5 ಲಕ್ಷ ನೆರವು: ಶಾಸಕ ವೇದವ್ಯಾಸ ಕಾಮತ್
17/01/2023, 20:18

ಮಂಗಳೂರು(reporterkarnataka.com): ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ನೆರವು ನೀಡಲಾಗುತ್ತದೆ. ಹೊಸ ಆಟೋರಿಕ್ಷಾ ಕೂಡ ನಾನು ಕೊಡಿಸುತ್ತೇನೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಮಂಗಳವಾರ ಪುರುಷೋತ್ತಮ ಪೂಜಾರಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಅವರು, ಪತ್ರಕರ್ತರ ಜತೆ ಮಾತನಾಡಿದರು.
‘ಹೊಸ ಟಿವಿಎಸ್ ಆಟೊರಿಕ್ಷಾವನ್ನು ಇನ್ನು ಕೆಲ ದಿನಗಳಲ್ಲೇ ಪುರುಷೋತ್ತಮ ಅವರಿಗೆ ಹಸ್ತಾಂತರ ಮಾಡಲಾಗುವುದು. ಇದೇ ವೇಳೆ 5 ಲಕ್ಷ ರೂ.ನೆರವು ಹಸ್ತಾಂತರ ಮಾಡಲಾಗುತ್ತದೆ’ ಎಂದು ಹೇಳಿದರು.
ಪುರುಷೋತ್ತಮ ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಸಂದಾಯ ಮಾಡಲಾಗುತ್ತದೆ. ಅವರ ಮಗಳ ಇಎಸ್ಐ ಹಣದಿಂದ ಭರಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ‘ಆಸ್ಪತ್ರೆ ಬಿಲ್ ಕಟ್ಟಬೇಡಿ. ಅದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ನಾವು ಭರವಸೆ ನೀಡಿದ್ದು ನಿಜ. ಆದರೆ, ಅವರ ಮಗಳ ಇಎಸ್ಐ ಹಣ ವ್ಯರ್ಥವಾಗುವುದು ಬೇಡ ಎಂಬ ಕಾರಣಕ್ಕೆ ಅವರಾಗಿಯೇ ಬಿಲ್ ಪಾವತಿ ಮಾಡಿದ್ದಾರೆ’ ಎಂದರು.
ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವ ನಡೆಯುತ್ತಿದೆ. ಜಿಲ್ಲಾಧಿಕಾರಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡಲಿದ್ದಾರೆ. ಪರಿಹಾರದ ಹಣವೂ ಶೀಘ್ರದಲ್ಲೇ ಸಂತ್ರಸ್ತ ಕುಟುಂಬದ ಕೈಸೇರುವಂತೆ ಮಾಡುತ್ತೇವೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು, ‘ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.
ಪಾಲಿಕೆ ಸದಸ್ಯ ಸಂದೀಪ್ ಗರೋಡಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್ವೆಲ್, ಬಜರಂಗ ದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಇದ್ದರು.