ಇತ್ತೀಚಿನ ಸುದ್ದಿ
ಪೆರಾಜೆ: ಸಾರ್ವಜನಿಕರಿಂದ ಸಂಭ್ರಮದ ದೀಪಾವಳಿ ಉತ್ಸವ; ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಬೆಳಕಿನಾಟ
13/11/2023, 19:45
![](https://reporterkarnataka.com/wp-content/uploads/2023/11/IMG-20231113-WA0015.jpg)
ಬಂಟ್ವಾಳ(reporterkarnataka.com): ಸೀತಾರಾಮ ನಗರ ಅಶ್ವತ್ಥಡಿ ಮಿತ್ತಪೆರಾಜೆ ಅಂಗನವಾಡಿ ಕೇಂದ್ರದ ವಠಾರದಲ್ಲಿ ಶ್ರೀ ಗುಡ್ಡಚಾಮುಂಡೇಶ್ವರಿ ಸೇವಾ ಟ್ರಸ್ಟ್ ಸಹಕಾರದಲ್ಲಿ ವಿಶ್ವ ಹಿಂದೂ ಪರಿಷತ್ತು ಪುತ್ತೂರು ವತಿಯಿಂದ ಸಾರ್ವಜನಿಕ ದೀಪಾವಳಿ ಉತ್ಸವ ಸಂಪನ್ನಗೊಂಡಿತು.
ಮುಸ್ಸಂಜೆಯ ವೇಳೆ ಬೆಳಕಿನ ಮರದಲ್ಲಿ ಮಾತೆಯರು ಹಣತೆ ಹಚ್ಚಿ ತುಡರ್ ಪರ್ಬಕ್ಕೆ ಚಾಲನೆ ನೀಡಿದರು. ನೆರೆದಿರುವ ಸಾರ್ವಜನಿಕರು ನೂರಾರು ಸಾಲು ದೀಪಗಳನ್ನು ಹಚ್ಚಿ ಅಂಗಣದಲ್ಲಿ ಬೆಳಕು ಚೆಲ್ಲಿದರು.
ಮುಖ್ಯಅತಿಥಿಯಾಗಿ ಆಗಮಿಸಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ದೀಪಾವಳಿ ಹಬ್ಬದ ಸಂದೇಶ ನೀಡಿ ಮಾತನಾಡಿದರು.
ಕೃಷಿ ಸಂಸ್ಕೃತಿಯ ತುಳುನಾಡಿನಲ್ಲಿ ದೀಪಾವಳಿ ಹಬ್ಬ ವಿಶೇಷವಾಗಿದೆ. ಜನಪದೀಯವಾದ ತುಡರ್ ಪರ್ಬ ನಿನ್ನೆ ಇಂದು ನಾಳೆ ಎಂಬ ಪರಿಕಲ್ಪನೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆಚರಣೆಯ ಸಡಗರದೊಂದಿಗೆ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿ ಉತ್ತಮ ಸಂಸ್ಕಾರ ನೀಡುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದು ಹಬ್ಬದ ಶುಭಾಶಯ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಸೇವಾ ಪ್ರಮುಖ್ ಪಿ.ಸೀತಾರಾಮ ಭಟ್ ವಾಮನ ಅವತಾರದ ಕತೆಯನ್ನು ಹೇಳಿ ಸಮಾಜದಲ್ಲಿಅನ್ಯಾಯ ಮಿತಿಮೀರಿದಾಗ ಸತ್ಯನಾರಾಯಣನ ಅವತಾರವಾಗುತ್ತದೆ. ಸಜ್ಜನ ಶಕ್ತಿ ರಾಷ್ಟ್ರ ಶಕ್ತಿಯಾಗಿ ದುಷ್ಟಶಕ್ತಿಗಳು ನಾಶವಾಗಬೇಕು ಎಂದರು.
ಹಿರಿಯ ಶಿಕ್ಷಕ ಜಯಾನಂದ ಪೆರಾಜೆ ಅಮ್ಮುಂಜೆಗುತ್ತು, ಪೊಳಲಿ ಸೀನಪ್ಪ ಹೆಗ್ಗಡೆಯವರ ತುಲುವಾಲ ಬಲಿಯೇಂದ್ರ ಪುಸ್ತಕದ ಸಂದಿ ಪಾಡ್ದನವನ್ನು ವಾಚಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಅಶ್ವತ್ಥಡಿ ಉಮೇಶ ಸಮೃದ್ಧಿ,ಕೃಷಿಕ ನಾರಾಯಣ ಎಂ.ಪಿ.,ಉಪನ್ಯಾಸಕ ಅನಿಲ್ ಕುಮಾರ್,ಸಾಮಾಜಿಕ ಕಾರ್ಯಕರ್ತ ಭುಜಂಗ,ಮಾತೆಯರಾದ ಗಾಯತ್ರಿ ಸೀತಾರಾಮ, ಭಾರತಿ ಪೆರಾಜೆ ಸಹಕರಿಸಿದರು.ಮಕ್ಕಳು ಸಿಡುಮದ್ದು ಸಿಡಿಸಿ ಸಂಭ್ರಮಿದರು.