ಇತ್ತೀಚಿನ ಸುದ್ದಿ
ಒಳನಾಡು ಜಲಮಾರ್ಗಗಳ ಅಭಿವೃದ್ಧಿಗಾಗಿ 2014 ರಿಂದೀಚೆಗೆ 5,200 ಕೋಟಿಗೂ ಅಧಿಕ ಹೂಡಿಕೆ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್
01/09/2023, 11:56

*ಈಶಾನ್ಯ ಭಾರತದ ಒಳನಾಡು ಜಲಮಾರ್ಗಗಳ ಅಭಿವೃದ್ಧಿಗೆ ರೂ. 1,700 ಕೋಟಿ ಹೂಡಿಕೆ
* ಎಲ್ಲ ಈಶಾನ್ಯ ರಾಜ್ಯಗಳ ಪ್ರತಿನಿಧಿಗಳು ಹಾಗೂ ಬಾಂಗ್ಲಾದೇಶ ಸರ್ಕಾರ ಮತ್ತು ಭೂತಾನ್ನ ರಾಯಲ್ ಸರ್ಕಾರದ ಪ್ರತಿನಿಧಿಗಳು ರೋಡ್ಶೋನಲ್ಲಿ ಭಾಗಿ
* ಸಾಗರ ಉದ್ಯಮದಲ್ಲಿ ಅವಕಾಶಗಳನ್ನು ಅನ್ವೇಷಿಸಲು ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಕರೆ
ಗುವಾಹಟಿ(reporterkarnataka.com): ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ, 2023 (ಜಿಎಂಐಎಸ್)ರ ರೋಡ್ಶೋವನ್ನು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಗುವಾಹಟಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಜಿಎಂಐಎಸ್ 2023 ರ ಪಾತ್ರವನ್ನು ಪ್ರತಿಪಾದಿಸಿದ ಶ ಸೋನೋವಾಲ್ ಅವರು ಒಳನಾಡಿನ ಜಲಮಾರ್ಗಗಳ ಪಾತ್ರವು ಪರ್ಯಾಯ ಸಾರಿಗೆ ವಿಧಾನವಾಗಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹೇಗೆ ವಿಕಸನಗೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋನೊವಾಲ್ ಅವರು, ಒಳನಾಡಿನ ಜಲಮಾರ್ಗಗಳು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಶಕ್ತಿ ತುಂಬುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಒಳನಾಡು ಜಲಮಾರ್ಗ ಕ್ಷೇತ್ರವು ಸರ್ಕಾರದಂತೆ ಮಹತ್ತರವಾದ ಉತ್ತೇಜನವನ್ನು ಪಡೆದುಕೊಂಡಿದೆ. 2014 ರಿಂದ ರೂ. 5200 ಕೋಟಿ ಹೂಡಿಕೆ ಮಾಡಿದೆ. ಇದು ಹಿಂದಿನ 28 ವರ್ಷಗಳಲ್ಲಿ ಮಾಡಿದ ಹೂಡಿಕೆಗಿಂತ 9 ವರ್ಷಗಳ ಅವಧಿಯಲ್ಲಿ ಸರ್ಕಾರ ಮಾಡಿದ ಹೂಡಿಕೆಯ ಮೊತ್ತದಲ್ಲಿ 200% ಕ್ಕಿಂತ ಹೆಚ್ಚು ಗಮನಾರ್ಹ ಏರಿಕೆಯಾಗಿದೆ. ಮೋದಿ ಸರ್ಕಾರದ ಅಡಿಯಲ್ಲಿ ಒಳನಾಡು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ಅತ್ಯಂತ ಮಹತ್ವದ ಯೋಜನೆ ಎನಿಸಿದೆ. ಭಾರತದ ಒಳನಾಡಿನ ಆರ್ಥಿಕ ಸಾಮಥ್ರ್ಯವನ್ನು ಅನಾವರಣ ಮಾಡುವಲ್ಲಿ ಈ ಶುದ್ಧ, ಪರಿಣಾಮಕಾರಿ ಮತ್ತು ಆರ್ಥಿಕ ಸಾರಿಗೆ ವಿಧಾನವು ಪ್ರಮುಖವಾಗಿರುತ್ತದೆ. ಒಳನಾಡಿನ ಜಲಮಾರ್ಗಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ನಮ್ಮ ಶ್ರೀಮಂತ ಮತ್ತು ಸಂಕೀರ್ಣ ಜಲಮಾರ್ಗ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಮೂಲಕ, ನಾವು ಉದ್ಯಮಕ್ಕಾಗಿ ಸಹಕಾರಿ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ, ಅದು ನಮ್ಮ ನೆರೆಯ ದೇಶಗಳ ನಡುವೆ ಹೆಚ್ಚಿನ ಸಹಕಾರವನ್ನು ಉತ್ತೇಜಿಸುತ್ತದೆ. ಇದು ದಕ್ಷಿಣ ಏಷ್ಯಾ ಪ್ರದೇಶದ ಎಲ್ಲಾ ದೇಶಗಳು ಮತ್ತು ಭಾರತದ ರಾಜ್ಯಗಳಿಗೆ ಬೃಹತ್ ವ್ಯಾಪಾರ ಮತ್ತು ವಾಣಿಜ್ಯ ಸಾಮಥ್ರ್ಯವನ್ನು ಅನಾವರಣ ಮಾಡಲಿದೆ ಎಂದು ಬಣ್ಣಿಸಿದರು.
ಬಂದರು ನೇತೃತ್ವದ ಅಭಿವೃದ್ಧಿಯ ಪಾತ್ರವನ್ನು ಎತ್ತಿ ಹಿಡಿದ ಸರ್ಬಾನಂದ ಸೋನೊವಾಲ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರ, ಭಾರತೀಯ ಬಂದರುಗಳನ್ನು ಜಾಗತಿಕ ಗುಣಮಟ್ಟಕ್ಕೆ ತರುವ ಗುರಿಯನ್ನು ಹೊಂದಿದೆ. ಹೆಚ್ಚಿನ ಕೈಗಾರಿಕೀಕರಣ, ಉತ್ಪಾದನೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಇದು ಅನುಕೂಲವಾಗುತ್ತದೆ. ಭಾರತವು ವೇಗವಾಗಿ ವಿಸ್ತರಿಸುತ್ತಿರುವ ಕಡಲ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಭಾರತೀಯರಾಗಿ, ವಿಕಾಸ ಮತ್ತು ರೂಪಾಂತರದಿಂದ ಗುರುತಿಸಲ್ಪಟ್ಟ ಈ ಯುಗದ ಭಾಗವಾಗಿರುವುದಕ್ಕೆ ನಾವು ಅಪಾರ ಹೆಮ್ಮೆಪಡುತ್ತೇವೆ. ನಮ್ಮ ಬಂದರುಗಳನ್ನು ಆಧುನೀಕರಿಸುವ ಮೂಲಕ, ಭಾರತವು ಕರಾವಳಿ ಸಮುದಾಯಗಳು, ಕರಾವಳಿ ಜಿಲ್ಲೆಗಳು ಮತ್ತು ಇಡೀ ರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುತ್ತದೆ ಎಂದು ವಿವರಿಸಿದರು.
ಗಮನಾರ್ಹ ಯೋಜನೆಗಳಲ್ಲಿ ಜಲಮಾರ್ಗ್ ವಿಕಾಸ್ ಮತ್ತು ಅರ್ಥ ಗಂಗಾ ಯೋಜನೆಗಳು ರೂ. 4,634 ಕೋಟಿಗಳ ದೊಡ್ಡ ಅಂದಾಜು ವೆಚ್ಚದ ಯೋಜನೆ ಬಜೆಟ್ನಿಂದ ಬೆಂಬಲಿತವಾಗಿದೆ. ಇದಲ್ಲದೆ, ಬ್ರಹ್ಮಪುತ್ರ ನದಿ (ಎನ್ಡಬ್ಲ್ಯು-2) 2020-21 ರಲ್ಲಿ ಅದರ ಅಭಿವೃದ್ಧಿಗಾಗಿ ರೂ. 474 ಕೋಟಿಗಳ ಅನುದಾನ ಪಡೆದಿದೆ. ಪಾಂಡುವಿನಲ್ಲಿ ಹಡಗು ದುರಸ್ತಿ ಸೌಲಭ್ಯಕ್ಕಾಗಿ ಗಮನಾರ್ಹ ಹಂಚಿಕೆಗಳು ರೂ. 208 ಕೋಟಿಗಳಿಗೆ ವಿಸ್ತರಿಸಿವೆ. ಈ ನಿಧಿಯು ಹೊಸ ರಾಷ್ಟ್ರೀಯ ಜಲಮಾರ್ಗಗಳಾದ ಬರಾಕ್ ನದಿ (ಎನ್ಡಬ್ಲ್ಯು-16) ಮತ್ತು ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗವನ್ನು ರೂ. 148 ಕೋಟಿಗಳಲ್ಲಿ ಅಭಿವೃದ್ಧಿಪಡಿಸಲು ವಿಸ್ತರಿಸುತ್ತದೆ ಮತ್ತು ಎನ್ಡಬ್ಲ್ಯು-3, ಎನ್ಡಬ್ಲ್ಯು-4, ಎನ್ಡಬ್ಲ್ಯು-5 ಗಾಗಿ ಮತ್ತು 13 ಇತರ ಹೊಸ ರಾಷ್ಟ್ರೀಯ ಜಲಮಾರ್ಗಗಳಿಗಾಗಿ ಒಟ್ಟು ರೂ. 267 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಈ ಹೆಚ್ಚಿದ ನಿಧಿಯು ರಾಷ್ಟ್ರೀಯ ಜಲಮಾರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಹೊಸ ಉಪಕ್ರಮಗಳ ಗುಚ್ಛವನ್ನು ವೇಗಗೊಳಿಸಿದೆ ಎಂದು ಹೇಳಿದರು.
ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ, 2023 ರ ಮುಖ್ಯ ಕಾರ್ಯಕ್ರಮದ ಭಾಗವಾಗಿ ಸಚಿವಾಲಯವು ಆಯೋಜಿಸುತ್ತಿರುವ ರೋಡ್ಶೋಗಳ ಸರಣಿಯಲ್ಲಿ ಗುವಾಹಟಿಯಲ್ಲಿ ರೋಡ್ಶೋ ಐದನೆಯದು. ಮುಖ್ಯ ಕಾರ್ಯಕ್ರಮವು 2023ರ ಅಕ್ಟೋಬರ್ 17-19 ರ ನಡುವೆ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಈ ಹಿಂದೆ ಕೋಲ್ಕತ್ತಾ, ಮಂಗಳೂರು, ವಿಶಾಖಪಟ್ಟಣಂ ಮತ್ತು ಗೋವಾದಲ್ಲಿ ಇದೇ ರೀತಿಯ ರೋಡ್ಶೋಗಳನ್ನು ಆಯೋಜಿಸಲಾಗಿತ್ತು. ಗುವಾಹಟಿಯ ನಂತರ, ಚೆನ್ನೈ, ಭುವನೇಶ್ವರ, ವಾರಣಾಸಿ, ಕೊಚ್ಚಿ, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ರೋಡ್ ಶೋಗಳನ್ನು ಆಯೋಜಿಸಲಾಗುವುದು.