ಇತ್ತೀಚಿನ ಸುದ್ದಿ
ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನೆರವೇರಿದ ಶಿವ ದೀಪೋತ್ಸವ: ನಂಜುಂಡೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗೆ ಪೂಜೆ
27/11/2023, 20:38

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ನವೆಂಬರ್ 28ರಂದು ನಡೆಯಲಿರುವ ಚಿಕ್ಕಜಾತ್ರ ಮಹೋತ್ಸವದ ಅಂಗವಾಗಿ 6ನೇ ದಿನವಾದ ಭಾನುವಾರ ಸಂಜೆ ಕಾರ್ತಿಕ ಮಾಸ ಹಾಗೂ ಹುಣ್ಣಿಮೆ ದಿನದಂದು ಶ್ರೀ ಶಿವ ದೀಪೋತ್ಸವವನ್ನು ಹಲವಾರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಶಿವ ದೀಪೋತ್ಸವಕ್ಕಾಗಿ ದೇವಾಲಯದ ಮುಂದೆ ಸುಮಾರು 20 ಅಡಿಗೂ ಉದ್ದದ ದೀಪ ಸ್ತಂಭವನ್ನು ನಿರ್ಮಾಣ ಮಾಡಿ ಅದಕ್ಕೆ ಪೂಜೆ ಸಲ್ಲಿಸಲಾಯಿತು.
ಅಲಂಕೃತಗೊಂಡ ಶ್ರೀ ನಂಜುಂಡೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರ ತಂದು ಪ್ರಾಂಗಣದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದ ಸುತ್ತ ಮೆರವಣಿಗೆಯಲ್ಲಿ ಬಂದ ಉತ್ಸವ ಮೂರ್ತಿಗಳನ್ನು ದೀಪ ಸ್ತಂಭದ ಮುಂಭಾಗದ ಶಿವ ಮಂಟಪದಲ್ಲಿ ಕೂರಿಸಲಾಯಿತು. ಬಳಿಕ ದೀಪಸ್ತಂಭದಲ್ಲಿ ಅಳವಡಿಸಲಾಗಿದ್ದ ದೀಪ ಹಾಗೂ ಎಣ್ಣೆ ಹಚ್ಚಿದ್ದ ನೂರಾರು ಪೆಂಜುಗಳನ್ನು ಹೊತ್ತಿ ಉರಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಿವ ದೀಪೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ದೀಪೋತ್ಸವವನ್ನು ಕಣ್ತುಂಬಿ ಕೊಂಡು ತಮ್ಮ ಭಕ್ತಿ ಭಾವ ಮೆರೆದರು. ಅಲ್ಲದೆ ಹಲವಾರು ಭಕ್ತರು ದೇವಾಲಯದ ಮುಂಭಾಗ ವಿವಿಧ ಬಗೆಯ ದೀಪಾರತಿಗಳನ್ನು ಬೆಳಗುವ ಮೂಲಕ ಭಕ್ತಿಯ ಪರಾಕಾಷ್ಠೆ ಯಲ್ಲಿ ಮಿಂದೆದ್ದರು.
ಚಿಕ್ಕ ಜಾತ್ರೆ ಪ್ರಯುಕ್ತ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಸೇರಿದಂತೆ ಅರ್ಚಕ ವೃಂದ ಹಾಗೂ ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದೇವಾಲಯದ ಅರ್ಚಕರು ಪಾರುಪತ್ತೆಗಾರರು ಆದ Krwa ಶಿವಶಂಕರ ದೀಕ್ಷಿತ್ ಮಾತನಾಡಿ, ಶಿವ ದೀಪೋತ್ಸವದ ಬಗ್ಗೆ ತಿಳಿಸಿದರು.