ಇತ್ತೀಚಿನ ಸುದ್ದಿ
ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಜೋಕರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ
05/01/2023, 23:47

ಮಂಗಳೂರು(reporterkarnataka.com): ಬಿಜೆಪಿಯಲ್ಲಿ ಜೋಕರ್ ಯಾರಾದ್ರೂ ಇದ್ರೆ ಅದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ . ಪೆದ್ದು ಪೆದ್ದಾಗಿ ಬೇಜವಾಬ್ದಾರಿಯಿಂದ ಮಾತನಾಡುವ ಅವರ ತೂಕವಿಲ್ಲದ ಮಾತುಗಳಿಗೆ ಬೆಲೆಯೇ ಇಲ್ಲ. ವಿದೂಷಕ ರೀತಿಯಲ್ಲಿ ಮಾತನಾಡುವ ಕಟೀಲ್ ಗೆ ಕಾನೂನು ಬಗ್ಗೆ ಅರಿವು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.
ಗುರುವಾರ ಮಂಗಳೂರಿಗೆ ಆಗಮಿಸಿದ್ದ ಅವರು ಕುದ್ರೊಳ್ಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.
ಜೈಲಿಗೆ ಹಾಕೋದು ನ್ಯಾಯಾಲಯಗಳು, ಬಿಜೆಪಿಯವರಲ್ಲ. ಕೋರ್ಟ್ ವಿಚಾರಣೆ ಮಾಡಿ ತಪ್ಪಿತಸ್ಥ ಆದರೆ ಜೈಲಿಗೆ ಹಾಕುತ್ತದೆ. ಅವರು ಕಾನೂನು ಬಗ್ಗೆ ಅಧ್ಯಯನ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.
ಸಿಎಂ ಬೊಮ್ಮಾಯಿಗೆ ನಾನು ನಾಯಿಮರಿ ತರಹ ಅಂಥ ಹೇಳಿಲ್ಲ, ಮೋದಿ ವಿರುದ್ಧ ನಿಲ್ಲುವ ಧೈರ್ಯ ಇರಬೇಕು ಎಂದು ಹೇಳಿದ್ದೇ ಅಷ್ಟೇ. ರಾಜ್ಯದ ಹಿತ ಮುಖ್ಯ, ಕೇಂದ್ರದ ಜತೆ ಧೈರ್ಯವಾಗಿ ಮಾತನಾಡಿ ಅನುದಾನ ತರಬೇಕು ಎಂದು ಹೇಳಿದ್ದೆ. ನಾಯಿ ಮರಿ ತರಹ ಇರಬಾರದು ಎಂದು ಹೇಳಿರುವುದರಲ್ಲಿ ತಪ್ಪೆನು? ಅಸಂವಿಧಾನಿಕ ಪದ ಬಳಕೆ ಮಾಡಿಯೇ ಇಲ್ಲ ಎಂದು ಹೇಳಿದರು.
‘ನನ್ನ ಟಗರು, ಹುಲಿಯಾ ಎಂದು ಕರಿತಾರಲ್ಲ, ಅದು ಬಿಡಿ ಯಡಿಯೂರಪ್ಪ ಅವರನ್ನ ರಾಜಾ ಹುಲಿ ಅಂತಾ ಅವರ ಪಕ್ಷದವರೇ ಕರಿತಾರೆ. ಇದು ಕೂಡ ಸಾಂವಿಧಾನಿಕ ಪದವಾ? ನಾಯಿ ನಂಬಿಕೆ ಇರೋ ಪ್ರಾಣಿ, ಧೈರ್ಯ ಇರಬೇಕು ಅನ್ನೋದಕ್ಕೆ ಹೇಳಿದ್ದು. ರಾಜ್ಯದ ಪಾಲು ಕೇಂದ್ರದ ಬಳಿ ಧೈರ್ಯವಾಗಿ ಕೇಳಿ ಎಂದು ಹೇಳಿದ್ದೇನೆ ಎಂದು ಮಾಧ್ಯಮದರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಉಳ್ಳಾಲ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವದಂತಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ನಾನು ಅಲೆಮಾರಿ ರಾಜಕಾರಣಿಯಲ್ಲ. ರಾಜ್ಯದ ಕೋಲಾರ, ಬಾದಾಮಿ, ವರುಣಾ ಸೇರಿದಂತೆ ಹಲವು ಕಡೆಗಳಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಉಳ್ಳಾಲದಿಂದ ಸ್ಪರ್ಧೆ ಮಾಡಲ್ಲ, ಹೈಕಮಾಂಡ್ ನಿರ್ದೇಶನದಂತೆ ನಡೆಯುತ್ತದೆ ಎಂದರು.
ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಆಗಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ರೀತಿ ಬೇಕಾದಷ್ಟು ಪ್ರಕರಣಗಳು ನಡೆದಿವೆ. ಶೇ 40 ಕಮಿಷನ್ ಸರ್ಕಾರ ಅಂತ ಗುತ್ತಿಗೆದಾರರ ಅಸೋಸಿಯೇಶನ್ ಅವರೇ ಕರೆದಿದ್ದಾರೆ. ಸಾಕಷ್ಟು ಮಂದಿ ಕಮಿಷನ್ ಕೊಡೊಕೆ ಆಗದೇ ಆತ್ಮಹತ್ಯೆ ಮಾಡಿದ್ದಾರೆ ಎಂದರು.