ಇತ್ತೀಚಿನ ಸುದ್ದಿ
ಹೊಸನತದೊಂದಿಗೆ ಮುಳಿಯ ಗೋಲ್ಡ್ ಮತ್ತು ಡೈಮಂಡ್: ಮುಳಿಯ ಕೃಷಿಗೋಷ್ಠಿ; ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ
09/05/2025, 19:03

ಪುತ್ತೂರು(reporterkarnataka.com): ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಿದೆ. ಈ ಪ್ರಯುಕ್ತ ಮೇ 11ರಂದು ಪುತ್ತೂರಿನ ಸುಲೋಚನಾ ಟವರ್ಸ್ನ ಅಪರಂಜಿ ರೂಫ್ ಗಾರ್ಡನ್ 3 ನೇ ಮಹಡಿಯಲ್ಲಿ ವಿವಿಧ ಕೃಷಿ ವಿಷಯಗಳು ಹಾಗೂ ಕೃಷಿ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಕೃಷಿಗೋಷ್ಠಿ ನಡೆಯಲಿದೆ ಎಂದು ಮುಳಿಯ ಗೋಲ್ಡ್ ಮತ್ತು ಡೈಮಂಡ್ ಆಡಳಿತ ಮಂಡಳಿಯ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಹಾರದಲ್ಲಿ ಕೃಷಿಯ ಪಾಲೂ ಸಾಕಷ್ಟಿದೆ. ಕೃಷಿ ಆದಾಯವು ಕೃಷಿಕರನ್ನು ಹೆಚ್ಚು ಸುದೃಢವಾಗುವಂತೆ ಮಾಡಿದರೆ ಕರಾವಳಿಯ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆಯಾಗುತ್ತದೆ. ಹೀಗಾಗಿಈಗ ಕೃಷಿಯಷ್ಟೇ ಅಲ್ಲ ಕೃಷಿಯ ಜೊತೆಗೆ ಮಾರುಕಟ್ಟೆ, ಕೃಷಿ ಉದ್ಯಮವೂ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು, ಕೃಷಿಕರನ್ನು ಮತ್ತಷ್ಟು ಕ್ರಿಯಾಶೀಲವಾಗುವಂತೆ ಮಾಡಲು ವಿವಿಧ ವಿಷಯಗಳೊಂದಿಗೆ ಕೃಷಿ ಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಯ ಜೊತೆಗೆ ಅದರ ಮಾರುಕಟ್ಟೆ ಹೇಗೆ , ಕೃಷಿಕನೇ ಕಡಿಮೆ ವೆಚ್ಚದಲ್ಲಿ ಹೇಗೆ ಮಾರುಕಟ್ಟೆ ಮಾಡಬಹುದು ಎನ್ನುವುದು ಕೂಡಾ ಮುಖ್ಯ ಈ ದೃಷ್ಟಿಯಿಂದ ಕೃಷಿಕ ಕೃಷ್ಣಪ್ರಸಾದ್ ಅವರು ತಮ್ಮ ಅನುಭದಿಂದ ಕೃಷಿ ವಸ್ತುಗಳ ಮಾರುಕಟ್ಟೆ ಬಗ್ಗೆ ಮಾತನಾಡುವರು. ಕೃಷಿ ಅಭಿವೃಧ್ಧಿಗೆ ರೈತರಿಗೆ ಕೈಗೆಟಕುವ ದರದಲ್ಲಿ ಯಂತ್ರಗಳ ಅಗತ್ಯವಿದೆ, ಇಂತಹ ಯಂತ್ರಗಳ ಬಗ್ಗೆ ಭಾಸ್ಕರ ಗೌಡ ಚಾರ್ವಾಕ ಮಾತನಾಡುವರು, ಇಂದು ಕೃಷಿಕರ ನಿರೀಕ್ಷೆಗಳು ಏನು ಎಂಬುದರ ಬಗ್ಗೆ ಡಾ.ವೇಣುಗೋಪಾಲ ಕಳೆಯತ್ತೋಡಿ ಮಾತನಾಡುವರು. ಅಡಿಕೆಯ ಜೊತೆಗೆ ಇಂದು ಉಪಬೆಳೆಯೂ ಅಗತ್ಯ ಇದೆ ಎಂದು ಎಲ್ಲೆಡೆಯೂ ಮಾತನಾಡುತ್ತಾರೆ, ತರಕಾರಿ ಕೃಷಿಯಲ್ಲೂ ಅದು ಸಾಧ್ಯ ಇದೆ ಎಂದು ಎಂಟೆಕ್ ಪದವೀಧರ ಕೃಷಿಕ ಸುಬ್ರಹ್ಮಣ್ಯ ಪ್ರಸಾದ್ ಚಣಿಲ ಅವರು ಮಾತನಾಡುವರು. ಮಾಧ್ಯಮಗಳು ಕೂಡಾ ಇಂದು ಕೃಷಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಕಾಲಕ್ಕೆ ಡಿಜಿಟಲ್ ಮಾಧ್ಯಮ ಚಾಲ್ತಿಯಲ್ಲಿದೆ. ನೈಜವಾದ ಮಾಹಿತಿಯನ್ನು ಕೃಷಿಕನೂ ಮಾಧ್ಯಮದ ಹೇಗೆ ನೀಡಬಹುದು ಎನ್ನುವುದರ ಬಗ್ಗೆ ರಾಧಾಕೃಷ್ಣ ಆನೆಗುಂಡಿ ಮಾತನಾಡುವರು. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮವು ಮಧ್ಯಾಹ್ನದವರೆಗೆ ನಡೆಯಲಿದೆ. ಕೃಷಿ ಸಂವಾದವನ್ನು ಪತ್ರಕರ್ತ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಮುಳಿಯ ಮಾರ್ಕೆಂಟಿಗ್ ವಿಭಾಗದ ಸಲಹೆಗಾರ ವೇಣು ಶರ್ಮ ನಡೆಸಿಕೊಡುವರು.