ಇತ್ತೀಚಿನ ಸುದ್ದಿ
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿ: ಸೆಲೂನ್ ಮಾಲೀಕ ಆತ್ಮಹತ್ಯೆ
04/02/2025, 11:30
ಸಾಂದರ್ಭಿಕ ಚಿತ್ರ
ರಾಣೆಬೆನ್ನೂರು (reporterkarnataka.com): ಸಾಲ ನೀಡುವಂತೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ರಾಣಿಬೆನ್ನೂರಿನಲ್ಲಿ ನಡು ವಯಸ್ಕ ವ್ಯಕ್ತಿಯೊಬ್ಬರು
ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಅಡವಿ ಆಂಜನೇಯ ಬಡಾವಣೆಯ ನಿವಾಸಿ, ಸೆಲೂನ್ ಮಾಲೀಕ ಮಾಲತೇಶ ನಾಗಪ್ಪ ಅರಸೀಕೆರೆ (45) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಮಾಲತೇಶ, ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅವರ ಪತ್ನಿ ಗೀತಾ ದೂರು ನೀಡಿದ್ದಾರೆ. ಬೆಲ್ಸ್ಟಾರ್ ಕಂಪನಿಯ ಪ್ರತಿನಿಧಿ ಜ್ಯೋತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ-ಸಹಾಯ ಸಂಘದ ಅಂಜನಾ ಹಾಗೂ ಐಡಿಎಫ್ಸಿಯ ರಜಾಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲತೇಶ ಅವರು ಸಲೂನ್ ಅಂಗಡಿ ನಡೆಸುತ್ತಿದ್ದರು. ಮನೆ ಮತ್ತು ಸಲೂನ್ ಅಂಗಡಿ ನಿರ್ವಹಣೆಗಾಗಿ ಧರ್ಮಸ್ಥಳ ಸ್ವ-ಸಹಾಯ ಸಂಘ, ಬೆಲ್ಸ್ಟಾರ್, ಐಡಿಎಫ್ಸಿ ಹಾಗೂ ಇತರೆ ಕಡೆಗಳಲ್ಲಿ ಒಟ್ಟು 6.45 ಲಕ್ಷ ಸಾಲ ಮಾಡಿದ್ದರು. ವ್ಯಾಪಾರ ಇಲ್ಲದಿದ್ದರಿಂದ, ಸಾಲ ಕಂತು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿತ್ಯವೂ ಸಲೂನ್ ಹಾಗೂ ಮನೆ ಬಳಿ ಬರುತ್ತಿದ್ದ ಆರೋಪಿಗಳು, ಸಾಲದ ಕಂತು ಕಟ್ಟುವಂತೆ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ.
ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ, ಸಾಲದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.