ಇತ್ತೀಚಿನ ಸುದ್ದಿ
ಮತ್ತೆ ಕಾಂಗ್ರೆಸ್ ವೇದಿಕೆಯೇರಿದ ಹಿರಿಯ ಮುತ್ಸದ್ಧಿ: ‘ಪ್ರಜಾಧ್ವನಿ’ಯಲ್ಲಿ ಸಿದ್ದರಾಮಯ್ಯ- ಪೂಜಾರಿ ಸಮಾಗಮ!
23/01/2023, 11:20

ಮಂಗಳೂರು(reporterkarnataka.com): ದಶಕಗಳ ಬಳಿಕ ಕಾಂಗ್ರಸ್ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ವೇದಿಕೆ ಹಂಚಿಕೊಂಡ ಎಲ್ಲರ ಕುತೂಹಲಕ್ಕೆ ಕಾರಣರಾದರು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟು ಟೀಕೆಕಾರರಾದ ಪೂಜಾರಿ ಅವರು ಭಾನುವಾರ ನಗರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡರು. ವಯೋಸಹಜ ಸಮಸ್ಯೆಗಳಿದ್ದರೂ ಪೂಜಾರಿ ಅವರು ತಾಳ್ಮೆಯಿಂದ ಎಲ್ಲ ನಾಯಕರುಗಳ ಭಾಷಣವನ್ನು ಆಲಿಸಿದರು. ಕಾಂಗ್ರೆಸ್ ನ ಭೀಷ್ಮ ಎಂದೇ ಪರಿಗಣಿಸಲ್ಪಟ್ಡ ಪೂಜಾರಿ ಅವರ ಜತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸುರ್ಜೇವಾಲ, ಡಾ.ಜಿ. ಪರಮೇಶ್ವರ್ ಸೇರಿದಂತೆ ಪಕ್ಷದ ಘಟಾನುಘಟಿಗಳು ಗ್ರೂಪ್ ಫೋಟೋ ತೆಗೆಸಿಕೊಂಡರು.
2013ರಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರ ಕಾರ್ಯ ವೈಖರಿಯನ್ನು ಪೂಜಾರಿ ಅವರು ಕಟು ಟೀಕೆ ಮಾಡುತ್ತಿದ್ದರು.
ಅಂದು ಹಂಪನಕಟ್ಟೆಯ ಬಾಡಿಗೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಪೂಜಾರಿ ಅವರು ಪತ್ರಿಕಾಗೋಷ್ಠಿ ಕರೆದು ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ನಂತರ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ಪೂಜಾರಿ ಅವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನಿರಾಕರಿಸಿದರು. ಆ ಮೂಲಕ ತಾನೇ ಬಾಡಿಗೆ ಕಟ್ಟಿ ತೆರೆದಿದ್ದ ಕಾಂಗ್ರೆಸ್ ಕಚೇರಿಗೆ ಹೋಗುವುದನ್ನು ಪೂಜಾರಿ ಅವರು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ನಿಷ್ಠುರವಾದಿಯಾದ ನೇರ ನಡೆ- ನುಡಿಯ ಪೂಜಾರಿ ಅವರು ನಂತರದ ದಿನಗಳಲ್ಲಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದೀಗ ಅದೆಲ್ಲ ಇತಿಹಾಸ.