ಇತ್ತೀಚಿನ ಸುದ್ದಿ
ಚಾರ್ಮಾಡಿ ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು; ಪಶ್ಚಿಮ ಘಟ್ಟದ ಹುಲ್ಲುಗಾವಲು ಭಸ್ಮ; ಕಿಡಿಗೇಡಿಗಳಿಂದ ಕೃತ್ಯ?
03/02/2026, 12:39
ಚಿಕ್ಕಮಗಳೂರು(reporterkarnataka.com): ಚಾರ್ಮಾಡಿ ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು ಕಾಣುಸಿಕೊಂಡಿದ್ದು, ಬೆಂಕಿಯ ತೀವ್ರತೆಗೆ ಅರಣ್ಯದ ಸೂಕ್ಷ್ಮ ಹುಲ್ಲುಗಾವಲುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಮಾರ್ಗದ ಸಮೀಪವೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಭೀತಿ ಮೂಡಿದೆ. ಗಾಳಿ ವೇಗವಾಗಿ ಬೀಸುತ್ತಿರುವ ಕಾರಣ ಬೆಂಕಿ ಕ್ಷಣ ಕ್ಷಣಕ್ಕೂ ವ್ಯಾಪಿಸುತ್ತಿದ್ದು, ನಿಯಂತ್ರಣ ಕಾರ್ಯಾಚರಣೆ ಕಷ್ಟಕರವಾಗಿದೆ.

ದಟ್ಟ ಹೊಗೆಯಿಂದ ಸುತ್ತಮುತ್ತಲ ಪ್ರದೇಶಗಳು ಆವರಿಸಲ್ಪಟ್ಟಿದ್ದು, ಚಾರ್ಮಾಡಿ ಘಾಟ್ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಕಠಿಣ ಭೂಭಾಗ ಮತ್ತು ಗಾಳಿ ವೇಗ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡೆತಡೆ ಎದುರಾಗಿದೆ. ಈ ಕಾಡ್ಗಿಚ್ಚಿನಿಂದ ಅರಣ್ಯದ ಜೀವಜಾಲಕ್ಕೂ ಭಾರೀ ಅಪಾಯ ಎದುರಾಗಿದ್ದು, ಪರಿಸರ ತಜ್ಞರು ಇಂತಹ ಘಟನೆಗಳು ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಗಂಭೀರ ಹೊಡೆತ ನೀಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.












