ಇತ್ತೀಚಿನ ಸುದ್ದಿ
ಮಣಿಪಾಲ: ಮತ್ಸ್ಯಗಂಧ ರೈಲಿನಲ್ಲಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
08/12/2022, 11:37

ಮಣಿಪಾಲ(reporterkarnataka.com): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳನ್ನು ಕಳವು ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ(44) ಅವರ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಇವರು ಡಿ.6ರಂದು ಉಡುಪಿ ಕಟಪಾಡಿಯಲ್ಲಿ ನಡೆಯಲಿರುವ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.5ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬಯಿಯ ಪನ್ ವೇಲಿನಿಂದ ಮತ್ಸ್ಯಗಂದ ರೈಲಿನಲ್ಲಿ ಉಡುಪಿಗೆ ಹೊರಟಿದ್ದರು ಎನ್ನಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಧರಿಸುವುದಕ್ಕಾಗಿ ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಸೀರೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡಿದ್ದರು. ಡಿ.6ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ರೈಲು ಕುಂದಾಪುರ ಸ್ಟೇಷನ್ ತಲುಪಿದ್ದು, ಆಗ ಉಡುಪಿಯಲ್ಲಿ ಇಳಿಯುವುದಕ್ಕೆ ಇವರು ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದರು.
ರೈಲು ಮುಂಜಾನೆ 5.40ರ ಸುಮಾರಿಗೆ ಉಡುಪಿಯ ರೈಲು ಸ್ಟೇಷನ್ ಗೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿದ್ದಾರೆ. ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ ಆಗಿದ್ದು, ಒಟ್ಟು ಮೌಲ್ಯ 34 ಲಕ್ಷ ರೂ. ಆಗಬಹುದು ಹಾಗೂ ಕಳವಾದ ಡೈಮಂಡ್ ನ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.