ಇತ್ತೀಚಿನ ಸುದ್ದಿ
ಮಂಗಳೂರಿಗೆ ಮತ್ತೊಂದು ಹೊಸ ಎಕ್ಸ್ಪ್ರೆಸ್ ರೈಲು; ಕರ್ನಾಟಕ ಕರಾವಳಿಯಿಂದ ತಮಿಳುನಾಡಿಗೆ ಸಂಪರ್ಕ
08/03/2026, 12:45
ಮಂಗಳೂರು(reporterkarnataka.com): ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ನ್ಯೂಸ್. ಹೊಸ ಎಕ್ಸ್ಪ್ರೆಸ್ ಸೇವೆ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮಂಗಳೂರು – ತಿರುನಲ್ವೇಲಿ ನಡುವೆ ಈ ಹೊಸ ಎಕ್ಸ್ಪ್ರೆಸ್ ಸಂಚಾರ ನಡೆಸಲಿದೆ. ದಕ್ಷಿಣ ಭಾರತದ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮಿಳುನಾಡಿಗೆ ಹೊಸ ರೈಲು ಸೇವೆಗಳು, ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೆಚ್ಚಿಸಲು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ. ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರ ಮನವಿಯ ಮೇರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆ ಜಾರಿಗೆ ತರಲಾಗುತ್ತಿದೆ. ಒಟ್ಟು 4 ಹೊಸ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಆ ಪೈಕಿ ಮಂಗಳೂರು – ತಿರುನಲ್ವೇಲಿ ಎಕ್ಸ್ಪ್ರೆಸ್ ಒಂದಾಗಿದೆ.
*ಮಂಗಳೂರಿಗೆ ಸಾಲು ಸಾಲು ಹೊಸ ರೈಲು:*
ಮಂಗಳೂರಿಗೆ ಕಳೆದ 2 – 3 ತಿಂಗಳಿಂದ ಸಾಲು ಸಾಲು ಹೊಸ ರೈಲುಗಳನ್ನು ರೈಲ್ವೆ ಇಲಾಖೆ ಮಂಜೂರು ಮಾಡುತ್ತಿದೆ. ತಮಿಳುನಾಡಿನ ನಾಗರಕೋಯಿಲ್ – ಕರ್ನಾಟಕದ ಮಂಗಳೂರು ನಡುವೆ ಅಮೃತ್ ಭಾರತ್ ರೈಲು ಸೇವೆಯನ್ನು ಆರಂಭಿಸಿತ್ತು. ಮುಂದಿವರೆದು, ಕಳೆದ ತಿಂಗಳು ತಾಂಬರಂ (ಚೆನ್ನೈ) – ಮಂಗಳೂರು ನಡುವೆ ಅಮೃತ್ ಭಾರತ್ ಎಕ್ಸ್ಪ್ರೆಸ್, ರಾಮೇಶ್ವರ ಮಂಗಳೂರು ನಡುವೆ ಎಕ್ಸ್ಪ್ರೆಸ್ ಸೇವೆ ಆರಂಭಿಸಿತ್ತು. ಈಗ ಮತ್ತೊಂದು ಎಕ್ಸ್ಪ್ರೆಸ್ ಸೇವೆ ಸಿಕ್ಕಂತಾಗಿದೆ.
ದಕ್ಷಿಣ ರೈಲ್ವೆ ಆರಂಭಿಸುತ್ತಿರುವ ಹೊಸ ನಾಲ್ಕು ರೈಲುಗಳು:
ಮಂಗಳೂರು – ತಿರುನಲ್ವೇಲಿ ಎಕ್ಸ್ಪ್ರೆಸ್ (16707/16708): ಕರಾವಳಿ ಭಾಗದ ಜನರಿಗೆ ಅನುಕೂಲವಾಗುವಂತೆ ಮಂಗಳೂರು ಮತ್ತು ತಿರುನಲ್ವೇಲಿ ನಡುವೆ ಹೊಸ ಎಕ್ಸ್ಪ್ರೆಸ್ ರೈಲು ಆರಂಭವಾಗಲಿದೆ.
ಪೋತನೂರು (ಕೊಯಮತ್ತೂರು) – ಧನ್ಬಾದ್ (ಜಾರ್ಖಂಡ್) ಅಮೃತ್ ಭಾರತ್ ಎಕ್ಸ್ಪ್ರೆಸ್ (16619/16620): ಸುಸಜ್ಜಿತ ಸೌಲಭ್ಯವುಳ್ಳ ಅಮೃತ್ ಭಾರತ್ ರೈಲು ತಮಿಳುನಾಡು – ಜಾರ್ಖಂಡ್ ನಡುವೆ ಸಂಚರಿಸಲಿದೆ.
ಪಾಲಕ್ಕಾಡ್ – ಪೋಳ್ಳಾಚಿ ಮೆಮು (ಮೆಮು) (66623/66624): ತಮಿಳುನಾಡು ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲು ಈ ಹೊಸ ಮೆಮು ರೈಲನ್ನು ಪರಿಚಯಿಸಲಾಗಿದೆ.
ಮೈಲಾಡುತುರೈ – ಕಾರೈಕ್ಕುಡಿ ಪ್ಯಾಸೆಂಜರ್ (56835/56836): ಸ್ಥಳೀಯರಿಗೆ ಅನುಕೂಲ
ಹೊಸ ನಿಲುಗಡೆಗಳು
ಮಂಗಳೂರು ಸೆಂಟ್ರಲ್ – ರಾಮೇಶ್ವರಂ ಎಕ್ಸ್ಪ್ರೆಸ್ (16621/16622): ಈ ರೈಲು ಇನ್ಮುಂದೆ ತಿರೂರ್, ಉಡುಮಲೈಪೆಟ್ಟೈ ಮತ್ತು ಪರಮಕುಡಿ ನಿಲ್ದಾಣಗಳಲ್ಲಿಯೂ ನಿಲ್ಲಲಿದೆ.
ತಾಂಬರಂ – ರಾಮೇಶ್ವರಂ ಎಕ್ಸ್ಪ್ರೆಸ್ (16103/16104): ಈ ರೈಲಿಗೆ ಪನ್ರುತಿ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಹೊಸ ರೈಲ್ವೆ ಸೇವೆಗಳು ಮಾರ್ಚ್ 3 ನೇ ವಾರ ಜಾರಿಗೆ ಬರುವ ಸಾಧ್ಯತೆ ಇದೆ.












