ಇತ್ತೀಚಿನ ಸುದ್ದಿ
ಮಂಗಳೂರು: ನಾಳೆ ‘ಯುವಜನ ಹಬ್ಬ- ಕರ್ತವ್ಯ ಪಾಲನೆಗಾಗಿ ಯುವಜನ ಅಭಿವ್ಯಕ್ತಿ’ ಕಾರ್ಯಕ್ರಮ
26/09/2023, 20:11

ಮಂಗಳೂರು( reporterkarnataka.com):ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ “ಯುವಜನ ಹಬ್ಬ- ಕರ್ತವ್ಯ ಪಾಲನೆಗಾಗಿ ಯುವಜನ ಅಭಿವ್ಯಕ್ತಿ” ಎನ್ನುವ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಸೆ.27ರಂದು ನಡೆಯಲಿದೆ.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಉದ್ಘಾಟಿಸುವರು. ಯುವಜನರಿಗೆ ಸಂಬಂಧಿಸಿದ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದ್ದು ಸಂವಾದ ಸಂಸ್ಥೆಯ ಯುವಜನರು ಮಾಡಿರುವ ಅಧ್ಯಯನದ ವಿಷಯ ಮಂಡನೆ ಮತ್ತು ವಿಚಾರ ಮಂಥನ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕಿ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗುಲಾಬಿ ಬಿಳಿಮಲೆ ವಹಿಸಿಕೊಳ್ಳುವರು. ಮಧ್ಯಾಹ್ನ ಜನಪ್ರೀತಿ ಬಳಗದಿಂದ ಹಾಡುಗಳು, ಬಹುತ್ವದ ಗೀತರೂಪಕ, ಸಂವಾದ ಯುವ ಒಡನಾಡಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರು ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ, ರೆ. ಫಾ. ಮೆಲ್ವಿನ್ ಪಿಂಟೊ, ಮಂಗಳೂರು ವಿಶ್ವವಿದ್ಯಾನಿಲಯ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕರು ಡಾ. ನಾಗರತ್ನ ಕೆ.ಎ, ಸಂವಾದ ಸಂಸ್ಥೆಯ ಸಹಯಾನ ಪ್ರೋಗ್ರಾಂ ಲೀಡ್ ರಾಮಕ್ಕ ಉಪಸ್ಥಿತರಿರುವರು.