ಇತ್ತೀಚಿನ ಸುದ್ದಿ
Mangaluru | ಮಂಜನಾಡಿ: ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದು ಇಬ್ಬರು ಕಂದಮ್ಮಗಳು ಸಹಿತ 3 ಮಂದಿ ದಾರುಣ ಸಾವು
30/05/2025, 20:05

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಭಾರೀ ಮಳೆಗೆ ಶುಕ್ರವಾರ ಮುಂಜಾನೆ ಮಂಜನಾಡಿ ಗ್ರಾಮದ ಉರುಮನೆ ಮದಪಾಡಿ ಕೋಡಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ (58) ಅವರ ಮೊಮ್ಮಕ್ಕಳಾದ ಆರ್ಯನ್ (3) ಮತ್ತು ಆರುಷ್ (2) ಎಂದು ಗುರುತಿಸಲಾಗಿದೆ.
ವಿಪರೀತ ಮಳೆ ಹಿನ್ನೆಲೆ ಮನೆ ಮೇಲೆ ಧರೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಗೋಡೆ ಮಧ್ಯೆ ಸಿಲುಕಿದ್ದ ತಾಯಿ ಜೊತೆಗಿದ್ದ ಮಗು ಮೃತ ಪಟ್ಟಿದೆ. ತಾಯಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದೆ. ಮನೆಯಲ್ಲಿದ್ದ ಒಟ್ಟು 6 ಮಂದಿ ವಾಸವಾಗಿದ್ದರು.
ತೋಟದ ನಡುವಿರುವ ಈ ಮನೆ ಮೇಲೆ
ಶುಕ್ರವಾರ ಬೆಳಗ್ಗಿನ ಜಾವ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿತ್ತು. ಬೃಹತ್ ಗಾತ್ರದ ಮರ ಸಹಿತ ಸುಮಾರು 30 ಅಡಿ ಎತ್ತರದ ಧರೆ ಕುಸಿದು ಬಿದ್ದಿತ್ತು. ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ ಒಂದು ಕೋಣೆಯಲ್ಲಿ ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಆರುಷ್, ಆರ್ಯನ್ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಈ ಪೈಕಿ ಪ್ರೇಮಾ ಅವರು ಸ್ಥಳದಲ್ಲೇ ಅಸುನೀಗಿದ್ದು, ಪತಿ ಕಾಂತಪ್ಪ ಪೂಜಾರಿ ಅವರ ಎರಡೂ ಕಾಲುಗಳಿಗೆ ಗಂಭೀರವಾದ ಏಟು ತಗುಲಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅವರು ಅದೃಷ್ಟವಶಾತ್ ಪಾರಾಗಿದ್ದು, ಅವರು ನೆರೆಹೊರೆಯವರಿಗೆ, ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿದ್ದು ಮನೆಯು ಸಂಪೂರ್ಣ ಕುಸಿದ ಪರಿಣಾಮ ಅವರಿಂದ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಬಳಿಕ ಸ್ಥಳಕ್ಕೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿ ಜೆಸಿಬಿ, ಕ್ರೇನ್ ಸಾಗದ ದುರ್ಗಮ ಪ್ರದೇಶದಲ್ಲಿ ಮಧ್ಯಾಹ್ನದವರೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆಯಲ್ಲಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ, ಕಾಂತಪ್ಪ ಪೂಜಾರಿಯ ಪುತ್ರ ಸೀತಾರಾಮ್ ಅವರ ಮೂರು ವರ್ಷದ ಮಗು ಆರ್ಯನ್, ಎರಡು ವರ್ಷ ಪ್ರಾಯದ ಆರುಷ್ ಮೃತಪಟ್ಟಿದ್ದಾರೆ. ಆರುಷ್ನನ್ನು ಮಣ್ಣಿನಡಿಯಿಂದ ತೆಗೆದು ರಕ್ಷಣೆ ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ.
ಸೀತಾರಾಮ ಅವರ ಪತ್ನಿ ಅಶ್ವಿನಿ ಮತ್ತು ಇಬ್ಬರು ಪುಟ್ಟ ಕಂದಮ್ಮಗಳು ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡವು ಮೊದಲಿಗೆ ಹಿರಿಯ ಮಗು ಆರ್ಯನ್ ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಹರಸಾಹಸ ಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದ ಆರುಷ್ ನನ್ನ ಹೊರ ತೆಗೆದಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮಗು ಮೃತಪಟ್ಟಿದೆ.
ಕಟ್ಟಡದ ಅವಶೇಷದಡಿ ಸಿಲುಕಿದ್ದ ಅಶ್ವಿನಿ ಅವರನ್ನೂ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದು ಗಂಭೀರವಗಾಯಗೊಂಡಿರುವ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.