ಇತ್ತೀಚಿನ ಸುದ್ದಿ
ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ‘ಲಕ್ಷ್ಯ ಸಂಭ್ರಮ – 2022’: ಗುಣಮಟ್ಟದ ಸೇವೆಗೆ ಮತ್ತೊಂದು ಗರಿ!
15/08/2022, 19:29

ಮಂಗಳೂರು(reporterkarnataka.com); ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಲಕ್ಷ್ಯ ಸಂಭ್ರಮ – 2022 ಆಚರಿಸಲಾಯಿತು.
ಹೆರಿಗೆ ಮತ್ತು ಸಂಬಂಧಿತ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಗುಣಮಟ್ಟದ ಸೇವೆಯನ್ನು ಮಹಿಳೆಯರಿಗೆ ನೀಡುತ್ತಾ ಬಂದಿರುವ ಸರಕಾರಿ ಲೇಡಿಗೋಶನ್ ಆಸ್ಪತ್ರೆ ರಾಷ್ಟ್ರೀಯ ಮಟ್ಟದಲ್ಲಿ ಲಕ್ಷ್ಯ ಪ್ರಮಾಣಪತ್ರವನ್ನು ಪಡೆದಿರುವ ಸವಿನೆನಪನ್ನು ಸಂಭ್ರಮಿಸಿ ಇನ್ನಷ್ಟು ಮೆರುಗುಗೊಳಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೀಪ ಪ್ರಜ್ವಲಿಸಿ ಮಾತನಾಡಿದ ನಿವಾಸಿ ವೈದ್ಯಾಧಿಕಾರಿಗಳಾದ
ಡಾ. ಬಾಲಕೃಷ್ಣ ರಾವ್ ಅವರು ಲಕ್ಷ್ಯ ಕಾರ್ಯಕ್ರಮದ ಹಿನ್ನೆಲೆ ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಸಾಧನೆಯ ಹಾದಿಯ ಎಡರು ತೊಡರುಗಳ ಕುರಿತು ನೋವು ನಲಿವುಗಳನ್ನು ಹಂಚಿಕೊಂಡ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ. ಆರ್. ಅವರು ಸರಕಾರಿ ಲೇಡಿಗೋಶನ್ ಆಸ್ಪತ್ರೆ ,ರಾಷ್ಟ್ರ ಮಟ್ಟದಲ್ಲಿ ಲಕ್ಷ್ಯ ಕಾರ್ಯಕ್ರಮದ ಗುಣಮಟ್ಟದ ಆರೋಗ್ಯ ಸೇವಾ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರದಿಂದ ಕೊಡ ಮಾಡಲ್ಪಡುವ ಪ್ರಮಾಣ ಪತ್ರದ ಜೊತೆ ಪ್ಲಾಟಿನಂ ಬ್ಯಾಜ್ ಪಡೆದಿದೆ ಎಂದರು.
ಸೇವಾ ಗುಣ ಮಟ್ಟವನ್ನು ಇನ್ನಷ್ಟು ವಿಸ್ತರಿಸಿ, ತಾಯಿ ಮತ್ತು ಶಿಶು ಮರಣವನ್ನು ಕನಿಷ್ಠತಮಕ್ಕೆ ಇಳಿಸುವ ನಿಟ್ಟಿನಲ್ಲಿ ಸರ್ವಸಿಬ್ಬಂದಿಗಳು ಶ್ರಮಿಸಬೇಕೆಂದು ಕರೆಯಿತ್ತರು.
ಲಕ್ಷ್ಯ ಗುಣಮಟ್ಟದ ಸೇವೆಯಲ್ಲಿ ವಿವಿಧ ರೀತಿಯಲ್ಲಿ ಪೂರಕ ಸಹಾಯ ಹಸ್ತವನ್ನು ನೀಡಿದ ಚೈತನ್ಯಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಲಕ್ಷ್ಯ ಮೆಂಟರ್ ಆಗಿ ಸೇವೆ ಸಲ್ಲಿಸಿದ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ರಾಘವೇಂದ್ರ ರಾವ್ ಮತ್ತು ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಾ.ಶರತ್ ಕುಮಾರ್, ಕ್ವಾಲಿಟಿ ಕನ್ಸಲ್ಟೆಂಟ್ ಡಾ.ರಾಜೇಶ್ವರಿ, ಕ್ವಾಲಿಟಿ ಮ್ಯಾನೇಜರ್ ಶಾಂತಿಪ್ರಿಯಾ, ಶುಶ್ರೂಷಾಧಿಕಾರಿಗಳಾದ ಅಂಬಿಕಾ, ಡಯಾನಾ ಅವರ ನೇತೃತ್ವದ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸಾ ಸರ್ಕಲ್, ಹಿರಿಯ ತಜ್ಞರುಗಳಾದ ಡಾ.ಅರವಿಂದ್, ಡಾ.ಸುಂದರಿ,ಡಾ.ಲೇಖಾ ಮತ್ತು ಸಹಕರಿಸಿದ ಹೇಮಂತ್ ಪ್ರಜ್ಞಾ, ಜಿತೇಶ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಶುಶ್ರೂಷಾಧೀಕ್ಷಕಿ
ತ್ರೇಸಿಯಮ್ಮ, ನರ್ಸಿಂಗ್ ಸುಪರ್ ವೈಸರ್ ಅನಸೂಯ ಉಪಸ್ಥಿತರಿದ್ದರು. ಪ್ರವೀಣ್ ಸ್ವಾಗತಿಸಿ, ಸುಮಂಗಲಾ ಪ್ರಸ್ತಾಪಿಸಿದರು.
ಲವಿನಾ, ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.