ಇತ್ತೀಚಿನ ಸುದ್ದಿ
ಮಂಗಳೂರು ದಸರಾ ವೈಭವ: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ದೇವಿ, ನವದುರ್ಗೆಯರ ಪ್ರತಿಷ್ಠಾಪನೆ
26/09/2022, 20:15

ಮಂಗಳೂರು(reporterkarnataka.com) : ನಗರದಲ್ಲಿ ನವರಾತ್ರಿ ಸಂಭ್ರಮ ಆರಂಭಗೊಂಡಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ದೇವಿಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದೆ.
ಶಾರದಾ ಮಾತೆ ಜತೆಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಥಾಪನೆಯನ್ನೂ ಮಾಡಲಾಗಿದೆ.
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಅನಾರೋಗ್ಯದ ಮಧ್ಯೆಯೂ ದಸರಾ ಉದ್ಘಾಟಿಸಿದ ಜನಾರ್ದನ ಪೂಜಾರಿ ಭಕ್ತರ ಜೊತೆ ಕೆಲ ಹೊತ್ತು ಬೆರೆತರು. ಒಂಭತ್ತು ದಿನಗಳ ಕಾಲ ಮಂಗಳೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಲಿದೆ. ದಸರಾ ಅಂಗವಾಗಿ ಕುದ್ರೋಳಿ ಸೇರಿದಂತೆ ಇಡೀ ಮಂಗಳೂರನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದಸರಾ ಪ್ರಯುಕ್ತ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ.
ಅಕ್ಟೋಬರ್ 5 ರಂದು ನಗರದ ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಮೂರ್ತಿಯನ್ನು ಕೊಂಡೊಯ್ದು ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುತ್ತದೆ.