1:40 AM Thursday5 - February 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,… ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್…

ಇತ್ತೀಚಿನ ಸುದ್ದಿ

ಮಂಗಳೂರು: ಬರೀ ಮಳೆಯಲ್ಲ, ಕಷ್ಟಗಳ ಸುರಿಮಳೆ; ಹೊರಗಿನ ಮಳೆ ನೀರು ಜತೆ ಸೇರದಿರಲಿ ಕಣ್ಣೀರು

16/06/2025, 12:54

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಕರಾವಳಿಯಲ್ಲಿ ಕಳೆದ 4- 5 ದಿನಗಳಿಂದ ನಿರಂತರವಾಗಿ ಬಿರುಸಿನ ಮಳೆಯಾಗುತ್ತಿದ್ದು, ಕಡಲನಗರಿ ಮಂಗಳೂರು ಸಂಪೂರ್ಣ ನಲುಗಿ ಹೋಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ- ಕಾಲೇಜು ಬಂದ್ ಆಗಿದೆ.
ಮಂಗಳೂರಿನಲ್ಲಿ ಮಳೆಯ ತೀವ್ರತೆ ಎಷ್ಟಿದೆಯೆಂದರೆ ಎಲ್ಲೂ ಕಾಗೆ, ಗುಬ್ಬಿ, ಪಕ್ಷಿಗಳು ಹಾರುತ್ತಿಲ್ಲ. ಭೂಮಿ ಸರಿಯಾಗಿ ನೇಸರನ ಕಾಣದೆ 4 ದಿನಗಳು ಉರುಳಿವೆ. ಆಗಸದತ್ತ ದೃಷ್ಟಿ ಹಾಸಿದರೆ ಬರೇ ಕಪ್ಪು ಮೋಡಗಳ ರಾಶಿ ಕಾಣಿಸುತ್ತಿದೆ. ಹಗಲು- ರಾತ್ರಿ ಮಳೆ ಸುರಿಯುತ್ತಲೇ ಇದೆ. ಈಗಾಗಲೇ 21 ಕುಟುಂಬಗಳು ಪುನರ್ವಸತಿ ಕೇಂದ್ರ ಸೇರಿವೆ. ದಿನಗೂಲಿ ಕಾರ್ಮಿಕರ ಹೊಟ್ಟೆಪಾಡು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ತುಂಬಿದ ರಸ್ತೆಯಲ್ಲಿ ಜಾಲಿ ರೈಡ್ ಮಾಡುವವರೂ ಇದ್ದಾರೆ. ರೀಲ್ಸ್ ತೆಗೆದು ಲೈಕ್ ಪಡೆಯುವವರೂ ಇದ್ದಾರೆ. ಇವರ ಜತೆ ಹೊಟ್ಟೆಪಾಡಿಗಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಮಂದಿಯೂ ಇದ್ದಾರೆ.
ನಗರದ 4 ದಿಕ್ಕುಗಳಲ್ಲಿರುವ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಳ್ಳ-ಕೊಳ್ಳ, ನದಿ, ತೊರೆ ಮೈ ತುಂಬಿ ಹರಿಯುತ್ತಿವೆ. ಮಂಗಳೂರಿನ ಗೇಟ್ ವೇ ಎಂದು ಪರಿಗಣಿಸಲಾದ ಪಂಪ್ ವೆಲ್ ಕಳೆದು 3- 4 ದಿನಗಳಿಂದ ಸಂಪೂರ್ಣ ಜಲಾವೃತಗೊಂಡಿದೆ. ಮೊದಲೇ ತಗ್ಗು ಪ್ರದೇಶವಾದ ಪಂಪ್ ವೆಲ್ ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನೆರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮುಂಭೈ- ತಿರುವನಂತಪುರ ರಾಷ್ಟ್ರೀಯ ಹೆದ್ದಾರಿ ಪಂಪ್ ವೆಲ್ ಮೂಲಕವೇ ಹಾದು ಹೋಗುತ್ತದೆ. ಸಂಚಾರ ನಿಬಿಡತೆ ಇಲ್ಲಿ ಜಾಸ್ತಿಯಾಗಿದೆ. ವ್ಯವಸ್ಥಿತವಾದ ತೋಡಿನ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ನೆರೆ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇನ್ನು ಮಂಗಳೂರು- ಮುಂಬೈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕೊಟ್ಟಾರ ಚೌಕಿಯಲ್ಲಿಯೂ ಇಂತಹದ್ದೇ ಸಮಸ್ಯೆ ಇದೆ. ಕೊಟ್ಟಾರ ಚೌಕಿ ಕೂಡ ತಗ್ಗು ಪ್ರದೇಶವಾಗಿದೆ. ಇಲ್ಲಿ ರಸ್ತೆಯನ್ನು ಎತ್ತರಿಸುವ ಕೆಲಸಕ್ಕೆ ನಮ್ಮನ್ನಾಳುವ ಮಂದಿ ಆಸಕ್ತಿ ತೋರಿಸಿಲ್ಲ. ರಾಜಕಾಲುವೆ ಒತ್ತುವರಿಯಾಗಿದೆ. ಸರಿಯಾಗಿ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಕೆಲವು ಕಡೆಗಳಲ್ಲಿ ಡ್ರಜ್ಜಿಂಗ್ ನ ಅಗತ್ಯವಿದೆ. ಇದು ಯಾವುದೂ ನಡೆದಿಲ್ಲ.
ನಗರದ ಹಲವೆಡೆ ತಗ್ಗು ಪ್ರದೇಶದಲ್ಲಿ ನೆರೆ ನೀರು ನುಗ್ಗುತ್ರಲೇ ಇದೆ‌. ನಗರದ ಹೃದಯಭಾಗವಾದ ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಮಿಷನ್ ರಸ್ತೆ ಮುಳುಗಡೆಯಾಗುತ್ತದೆ. ಅತ್ತಾವರ, ಪಾಂಡೇಶ್ವರ, ಮಂಗಳಾದೇವಿ, ಎಕ್ಕಾರು, ತೊಕ್ಕೊಟ್ಟು, ಕಲ್ಲಾಪು ಮುಂತಾದ ಪ್ರದೇಶಗಳು ಜಲಾವೃತಗೊಂಡಿವೆ. ಪ್ರತಿ ವರ್ಷವೂ ಇದೇ ರಾಗ. ಮುಳುಗಿದ ನಂತರ ಎಚ್ಚೆತ್ತಿಕೊಳ್ಳುವುದು, ಮಳೆಗೆ ದೂರು ಹಾಕುವುದು ವಾಡಿಕೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು