ಇತ್ತೀಚಿನ ಸುದ್ದಿ
ಮನೆ ಕುಸಿತ ಪ್ರದೇಶಕ್ಕೆ ಜಿಪಂ ಸಿಇಒ ಭೇಟಿ: ಸಂತ್ರಸ್ತರ ಜತೆ ಸಭೆ; ವಸತಿರಹಿತರಿಗೆ 15 ದಿನಗಳಲ್ಲಿ ನಿವೇಶನ ಭರವಸೆ
20/07/2022, 21:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಾಳೂರು, ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕುಸಿತ ಉಂಟಾದ ಪ್ರದೇಶಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಭೇಟಿ ನೀಡಿ ಅಧಿಕಾರಿಗಳು ಹಾಗೂ ಸಂತ್ರಸ್ತರ ಜತೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನಿಡುವಾಳೆ, ಮರ್ಕಲ್, ಬಾಳೂರು ಮೂರು ಭಾಗಗಳಲ್ಲಿ ಮನೆ ಕುಸಿತವಾದ ಸಂತ್ರಸ್ತರಿಗೆ ಪರ್ಯಾಯ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಶೀಘ್ರವಾಗಿ ಜಾಗ ಅನುಮೋದಿಸಿ ನೀಡಲಾಗುವುದು. ಬಾಳೂರು ಗ್ರಾಪಂ ಕಲ್ಲಕ್ಕಿ ಭಾಗದಲ್ಲಿ ವಸತಿ ರಹಿತರಿಗೆ ನೂತನವಾಗಿ ಸೂಚಿಸಿರುವ ಜಾಗವನ್ನು 15 ದಿನಗಳ ಅವಧಿಯಲ್ಲಿ ಅನುಮೋದಿಸಿ ಸಂತ್ರಸ್ತರಿಗೆ ವಿತರಿಸುವುದಾಗಿ ಭರವಸೆ ನೀಡಿದರು.
ಮನೆ ಬಿದ್ದು ಹೋದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆದೇಶ ನೀಡಲಾಗಿದ್ದು, ಬಹುತೇಕ ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಪರಿಹಾರ ಸಿಗದ ಸಂತ್ರಸ್ತರಿದ್ದರೆ ಹಾಗೂ ವಿವಿಧ ಕಡೆಗಳಲ್ಲಿ ಅಂಗನವಾಡಿ, ರಸ್ತೆ,ತಡೆಗೋಡೆ ಮಳೆಗೆ ಕುಸಿದು ಹೋಗಿದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು.
ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಯ ವೈದ್ಯರ, ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದ್ದು ಕೂಡಲೇ ಸಿಬ್ಬಂದಿಗಳನ್ನು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ನಿಯೋಜಿಸಲು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗುವುದು’ ಎಂದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಾಲೆ, ಅಂಗನವಾಡಿಗಳನ್ನು ಅಚ್ಚುಕಟ್ಟಾಗಿ ಗ್ರಾಮ ಪಂಚಾಯಿತಿ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಇಡಲಾಗಿದೆ. ಮರ್ಕಲ್ ಅಂಗನವಾಡಿ ಕೇಂದ್ರದ ನಿರ್ವಹಣೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.