11:46 PM Friday6 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಮಳೆ ಹನಿಯಲ್ಲೂ ಹಣದ ಹೊಳೆ?: ಸ್ಪೆಷಲ್ ಗ್ಯಾಂಗ್ ಹೆಸರಿನಲ್ಲಿ ಭ್ರಷ್ಟಾಚಾರ?; ಪಾಲಿಕೆ ಕಮಿಷನರೇ..ಮಿನಿ ಲಾರಿ, 480 ಕೆಲಸಗಾರರ ಪೆರೇಡ್ ನಡೆಸಿ !! 

16/07/2021, 07:34

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯು ಪ್ರತಿ ವರ್ಷದಂತೆ ಈ ಬಾರಿಯೂ ವಾರ್ಡ್ ಗೊಂದು ಸ್ಪೆಷಲ್ ಗ್ಯಾಂಗ್ ಗಳನ್ನು ರಚಿಸಿದ್ದು, ಇದರಲ್ಲಿ ಭ್ರಷ್ಟಾಚಾರದ ವಾಸನೆ ಮಂಗಳೂರು ಜನತೆಯ ಮೂಗಿಗೆ ಬಡಿಯಲಾರಂಭಿಸಿದೆ. ಪ್ರತಿ ವಾರ್ಡ್ ಗೆ 3.26 ಲಕ್ಷ ರೂ.ಗಳ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿದ್ದು, 60 ವಾರ್ಡ್ ಗಳಿಗೆ 2 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ಪೋಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪಾಲಿಕೆ ರಚಿಸುವ ಪ್ರತಿ ಸ್ಪೆಷಲ್ ಗ್ಯಾಂಗ್ ನಲ್ಲಿ ತಲಾ 8 ಮಂದಿ ಕೆಲಸಗಾರರು ಇರುತ್ತಾರೆ ಎಂದು ಲೆಕ್ಕ ತೋರಿಸಲಾಗುತ್ತದೆ. 8 ಮಂದಿಯಂತೆ 60 ವಾರ್ಡ್ ಗಳಿಗೆ ಒಟ್ಟು 480 ಕೆಲಸಗಾರರಿರುತ್ತಾರೆ. ಪ್ರತಿ ಗ್ಯಾಂಗ್ ಗೆ ಒಂದು ಮಿನಿ ಲಾರಿ, ಮರ ಕಡಿಯುವ ಕಟ್ಟರ್, ಹಗ್ಗ, ಟಾರ್ಚ್ ಇನ್ನಿತರ ಪರಿಕರ ನೀಡಲಾಗುತ್ತದೆ. ಮಳೆಗಾಲದ 3 ತಿಂಗಳು ಇವರಿಗೆ ಡ್ಯೂಟಿ ಇರುತ್ತದೆ. ಪ್ರತಿ ವಾರ್ಡ್ ನ ಚರಂಡಿ ಸ್ವಚ್ಛ ಮಾಡುವುದು, ಹೂಳು ತೆಗೆಯುವುದು, ಕೃತಕ ನೆರೆ ಬಂದರೆ ಕಾರ್ಯಪ್ರವೃತ್ತರಾಗುವುದು,

ಗಾಳಿ ಮಳೆಗೆ ಮರ ಬಿದ್ದರೆ ಅದನ್ನು ತೆರವುಗೊಳಿಸುವುದು ಇವರ ಕೆಲಸ. ಆದರೆ ಪಾಲಿಕೆ ಆಡಳಿತ ಹೇಳಿದಂತೆ ಈ ಯಾವುದೇ ಕೆಲಸ ಹೆಚ್ಚಿನ ವಾರ್ಡ್ ಗಳಲ್ಲಿ ಆಗಿರುವುದಿಲ್ಲ. ಚರಂಡಿ ಕ್ಲೀನ್ ನಡೆದೇ ಇಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ.

ಇದೆಲ್ಲದರ ನಡುವೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರಲ್ಲಿ
ಉಂಟಾಗಿರುವ ಸಂದೇಹ ಏನೆಂದರೆ, ಎಲ್ಲ 60 ವಾರ್ಡ್ ಗಳಲ್ಲಿ ಒಮ್ಮೆಲೇ ಮರ ಬೀಳುತ್ತಾ? ಮತ್ತು ಎಲ್ಲ ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆಯುತ್ತಾ ?ಎನ್ನುವುದು. ಹಾಗಾದರೆ ಇವರಿಗೆ ವಾರ್ಡ್ ಗೆ ಒಂದು ಮಿನಿ ಲಾರಿ ಹಾಗೂ ಪ್ರತಿ ವಾರ್ಡ್ ಗೆ 8 ಮಂದಿಯಂತೆ 480 ಮಂದಿ ಕೆಲಸಗಾರರ ಅಗತ್ಯವಿದೆಯೇ ಎಂದು ತೆರಿಗೆದಾರರು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಇಲ್ಲಿಂದಲೇ ಮಳೆಗಾಲದ ಕೆಸರಿನ ನಡುವೆ ಪಾಲಿಕೆಯ ಕೊಳಕು ಭ್ರಷ್ಟಾಚಾರ ಮೂಗಿಗೆ ಬಡಿಯಲಾರಂಭಿಸುತ್ತದೆ. ಒಂದು ಮಾಹಿತಿಯ ಪ್ರಕಾರ ಪಾಲಿಕೆ ಅಧಿಕಾರಸ್ಥರು ಜನರನ್ನು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. 480 ಕೆಲಸಗಾರರು ಮತ್ತು 60 ಮಿನಿ ಲಾರಿ ಎಲ್ಲವೂ ಬೋಗಸ್. ಇದು ಅಕ್ಷಾಂಶ, ರೇಖಾಂಶದ ಹಾಗೆ ಕಾಲ್ಪನಿಕ ಸಂಖ್ಯೆಯಾಗಿದೆ. 8-10 ಲಾರಿ ಮತ್ತು 10-20 ಕೆಲಸಗಾರಿಂದ ಇಡೀ 60 ವಾರ್ಡ್ ಗಳಲ್ಲಿ ಕಾಮಗಾರಿ ನಡೆಸಿದ ಶಾಸ್ತ್ರವನ್ನು ಮಾಡಿ ಮುಗಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಆಪಾದನೆ ನಿಜವಾಗಿಯೂ ಸತ್ಯಕ್ಕೆ ದೂರವಾಗಿದ್ದರೆ ಪಾಲಿಕೆ ಆಡಳಿತ 60 ಮಿನಿ ಲಾರಿ ಹಾಗೂ 480 ಮಂದಿ ಕೆಲಸಗಾರರನ್ನು ಜನರ ಮುಂದೆ ಪೆರೇಡ್ ನಡೆಸುವ ಅಗತ್ಯ ಎದುರಾಗುತ್ತದೆ. ಮಳೆಗಾಲದ ಹೆಸರಿನಲ್ಲಿ ಕಾರ್ಪೊರೇಟರ್ ಗಳು, ಗುತ್ತಿಗೆದಾರರು, ಪಾಲಿಕೆಯ ಎಂಜಿನಿಯರ್ ಗಳು ಹಣ ಹಂಚಿಕೊಳ್ಳುವುದು ಇನ್ನಾದರೂ ನಿಲ್ಲಬೇಕೆನ್ನುವುದು ಜನಸಾಮಾನ್ಯರ ಹಕ್ಕೊತ್ತಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು