ಇತ್ತೀಚಿನ ಸುದ್ದಿ
ಮಹಿಳೆಯರಿಗೆ ಸಮಾನತೆ ನೀಡುವ ದೇಶ ಪ್ರಗತಿ ಪಥದಲ್ಲಿ ಸಾಗುತ್ತದೆ: ಆಳ್ವಾಸ್ ನಲ್ಲಿ ಸಾಹಿತಿ ಡಾ. ವಸುಂಧರಾ ಭೂಪತಿ
09/11/2023, 21:52

ಮೂಡುಬಿದಿರೆ(reporterkarnataka.com): ಮಹಿಳೆಯರಿಗೆ ಸಮಾನತೆ ನೀಡುವ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂದು ಬೆಂಗಳೂರಿನ ವೈದ್ಯೆ ಹಾಗೂ ಸಾಹಿತಿ ಡಾ. ವಸುಂಧರಾ ಭೂಪತಿ ಹೇಳಿದರು.
ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ಸಮಿತಿ ಹಮ್ಮಿಕೊಂಡ ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಹೆಣ್ಣನ್ನು ಕೀಳರಿಮೆಯಿಂದ ನೋಡುತ್ತಿದೆ. ಅಂತಹ ತಾರತಮ್ಯ ಹೋಗಲಾಡಿಸಿ ಹೆಣ್ಣು ಗಂಡಿನಷ್ಟೆ ಸಮಾನಳು ಎಂಬ ಮನಸ್ಥಿತಿ ಸಮಾಜದಲ್ಲಿ ಮೂಡಬೇಕು.ಎಷ್ಟೋ ವಿಚಾರಗಳಲ್ಲಿ ಹೆಣ್ಣನ್ನು ತಪ್ಪು ಕಲ್ಪನೆಗಳಿಂದ ನೋಡುವುದಲ್ಲದೆ ಬಹಿಷ್ಕರಿಸುವ ಪದ್ದತಿಯನ್ನು ನಾವು ನೋಡುತ್ತಿದ್ದೇವೆ. ಆದರೆ ಅಂತಹ ತಪ್ಪಿನಲ್ಲಿ ಗಂಡಿನ ಪಾತ್ರವು ಇರುವುದೆಂದು ಯಾರು ಯೋಚಿಸುವುದಿಲ್ಲ. ದೌರ್ಜನ್ಯಕ್ಕೆ ಒಳಗಾದವರನ್ನು ಅನುಕಂಪದಿಂದ ನೋಡಬೇಕೆ ಹೊರತು ಬಹಿಷ್ಕರಿಸುವುದಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳು ಕಳೆದರೂ ಕೂಡ ನಾವು ದೌರ್ಜನ್ಯದ ಪ್ರಕರಣಗಳನ್ನು ನೋಡುತ್ತಿದ್ದೆವೆ ಎಂದರೆ ನಾವು ಈಗಿನ ಸಮಾಜಕ್ಕಿಂತ ಹಿಂದಕ್ಕೆ ಹೋಗುತ್ತಿದ್ದೇವೆ ಎಂಬುದಲ್ಲ, ಹಿಂದಕ್ಕೆ ಓಡುತ್ತಿದ್ದೇವೆ ಎನ್ನುವುದಾಗಿದೆ ಎಂದು ಎಚ್ಚರಿಸಿದರು.
ಹೆಣ್ಣನ್ನು ಕೇವಲ ರೇಷನ್ ಕಾರ್ಡ್ ನಲ್ಲಿ ಮಾತ್ರ ಯಜಮಾನಿ ಎಂದು ಪರಿಗಣಿಸದೆ, ನಿಜ ಜೀವನದಲ್ಲೂ ಯಜಮಾನಿಯಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್, ಸಂಯೋಜಕಿ ವಿದ್ಯಾ.ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಡಾ.ಸುಲತಾ ಸ್ವಾಗತಿಸಿದರು. ಉಪನ್ಯಾಸಕಿ ಉಷಾ ಬಿ. ನಿರೂಪಿಸಿರು. ಉಪನ್ಯಾಸಕಿ ಆಶಾ ವಂದಿಸಿದರು.