ಇತ್ತೀಚಿನ ಸುದ್ದಿ
ಮಧುರ ನಗರಿ ಮಂಡ್ಯದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ದಳಪತಿಗಳ ನಾಡಿನಲ್ಲಿ ಭಾರಿ ಜನಬೆಂಬಲ
12/03/2023, 17:35
ಸಪ್ನಾ ದಿನಕರ್ ಮದ್ದೂರು ಮಂಡ್ಯ
info.reporterkarnataka@gmail.com
ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭರ್ಜರಿ ರೋಡ್ ಶೋ ಸಕ್ಕರೆ ನಾಡು ಮಂಡ್ಯದಲ್ಲಿ ಭಾನುವಾರ ನಡೆಯಿತು. ಮಂಡ್ಯ ಜಿಲ್ಲೆಗೆ ಮೋದಿ ಅವರ ಮೊದಲ ಭೇಟಿ ಇದಾಗಿದೆ.
ದಳಪತಿಗಳ ನಾಡಿನಲ್ಲಿ ಬಿಜೆಪಿಯ ನರೇಂದ್ರ ಮೋದಿ ಅವರಿಗೆ ಭಾರೀ ಜನಸ್ತೋಮದೊಂದಿಗೆ ಸ್ವಾಗತಿಸಲಾಯಿತು. ರಾಜಕೀಯವಾಗಿ ಬಿಜೆಪಿ ಅಷ್ಟೇನು ಪ್ರಾಬಲ್ಯ ಹೊಂದದ ಮಂಡ್ಯದಲ್ಲಿ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಮಂಡ್ಯದ ಪ್ರವಾಸಿ ಮಂದಿರ ಸರ್ಕಲ್ನಿಂದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ
ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾಯಿತು. ಸುಮಾರು 2 ಕಿಮೀ. ಉದ್ದಕ್ಕೆ ರೋಡ್ ಶೋ ನಡೆದ ಬಳಿಕ ನಂದಾ ಸರ್ಕಲ್ ನಲ್ಲಿ ಮುಕ್ತಾಯವಾಯಿತು.



ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು ಪ್ರಧಾನಿ ಮೇಲೆ ಹೂವಿನ ಸುರಿಮಳೆಗೈದಿದ್ದಾರೆ. ಪ್ರತಿಯಾಗಿ ಪ್ರಧಾನಿ ಮೋದಿ ಅವರು ಕಾರಿನ ಮೇಲೆ ಬಿದ್ದ ಹೂವನ್ನು ತನ್ನ ಅಭಿಮಾನಿಗಳತ್ತ ಎಸೆದಿದ್ದಾರೆ.
ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ.
ಮಂಡ್ಯ ನಗರ ಕೇಸರಿಮಯವಾಗಿ ಬದಲಾಗಿತ್ತು. ಮಂಡ್ಯದ ಎಲ್ಲಾ ರಸ್ತೆಗಳಲ್ಲೂ ಬಿಜೆಪಿ ಬಾವುಟ, ಬ್ಯಾನರ್ ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿತ್ತು. ರೋಡ್ ಶೋಗಾಗಿ ಹೆದ್ದಾರಿ ಬದಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.
ರೋಡ್ ಶೋ ವೇಳೆ ಕಾರ್ಯಕರ್ತರು ಮೋದಿ…ಮೋದಿ…ಮೋದಿ ಎಂದು ಜೈಕಾರ ಕೂಗುವುದು ಮುಗಿಲು ಮುಟ್ಟಿತ್ತು.














