ಇತ್ತೀಚಿನ ಸುದ್ದಿ
ಮಡದಿಯ ಮೇಲೆ ಅನುಮಾನ: ಮಚ್ಚಿನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ: ಪತಿ ಈಗ ಪೊಲೀಸರ ಅತಿಥಿ
05/01/2024, 22:22

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಪತ್ನಿ ಬೇರೆಯವರೊಂದಿಗೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾಳೆ ಎಂದು ಅನುಮಾನಗೊಂಡು ಪತಿ, ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
27 ವರ್ಷದ ದೇವಮಣಿ ಹಲ್ಲೆಗೆ ಒಳಗಾದ ಮಹಿಳೆ. 37 ವರ್ಷದ ಪ್ರಕಾಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪತ್ನಿ ದೇವಮಣಿ ಮೊಬೈಲ್ ಪೋನ್ ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಾಳೆ ಎಂದು ಪತಿ, ಪತ್ನಿಯ ಜೊತೆ ಖ್ಯಾತೆ ತೆಗೆದಿದ್ದಾನೆ. ಪತಿ ಮತ್ತು ಪತ್ನಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳವು ವಿಕೋಪಕ್ಕೆ ತಿರುಗಿ, ಪತಿ ಪ್ರಕಾಶ್ ಮಚ್ಚಿನಿಂದ ಹೆಂಡತಿಯ ಕೈಗೆ ಮತ್ತು ಕುತ್ತಿಗೆ ಸೇರಿದಂತೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಪತ್ನಿ ಕೆಳಗಡೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಕೊಂಡು ನರಳಾಡುತ್ತ ಬಿದ್ದಿದ್ದ ದೇವಮಣಿಯನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ದೇವಮಣಿಯ ತಂದೆ ಮಹದೇವಪ್ಪ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು, ಹಲ್ಲೆ ನಡೆಸಿದ ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.