ಇತ್ತೀಚಿನ ಸುದ್ದಿ
ಕೂಡ್ಲಿಗಿ ಪಟ್ಟಣ ಪಂಚಾಯಿತಿ: ಬ್ರೋಕರ್ ಹಾವಳಿ ತಪ್ಪಿಸಲು ಖಾತಾ ನಕಲು ವಿತರಣಾ ಅಭಿಯಾನ
09/11/2023, 10:40

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿ, ಹಣ ಮಾಡುವ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶದಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ವತಿಯಿಂದ ಇಂದು ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಖಾತಾ ನಕಲು ವಿತರಣಾ ಅಭಿಯಾನ ಪ್ರಾರಂಭಿಸಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಖಾತಾ ನಕಲು (ಫಾರ್ಮ್ -3) ಪಡೆಯಲು ಬಂದ ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅದರ ನಿಯಮ ಪಾಲನೆ ಮಾಡಿ ಕೊಡಲು 7 ದಿನದ ಸಮಯ ಇರುತ್ತದೆ, ತೆರಿಗೆ ಕಟ್ಟಿದ ರಸೀದಿ ಪ್ರತಿಗಳು ಸೇರಿದಂತೆ ಹಕ್ಕು ನಿರೂಪಿಸುವ ದಾಖಲಾತಿಗಳು ಸರಿ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತಾ ನಕಲು ನೀಡಲಾಗುವುದು. ಸಾರ್ವಜನಿಕರು ಖಾತಾ ನಕಲು ಪಡೆಯಲು ನೇರವಾಗಿ ಬಂದು ಅಧಿಕಾರಿಗಳಲ್ಲಿ ಇದರ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಯಾರೋ ಮಧ್ಯವರ್ತಿಗಳ ನಡುವೆ ಹೆಚ್ಚಿನ ಹಣ ಕೊಟ್ಟು ಅಧಿಕಾರಿಗಳ ಹೆಸರು ಸಹ ಈ ವಿಚಾರದಲ್ಲಿ ದುರ್ಬಳಕೆ ಮಾಡಿ ಹಣ ವಸೂಲಿ ಮಾಡುವುದನ್ನು ಅರಿತು ವಿಜಯನಗರ ಜಿಲ್ಲಾಧಿಕಾರಿಯವರು ಪಪಂ ಅಧಿಕಾರಿಗಳ ಸಭೆ ಕರೆದು ಅದರಲ್ಲಿ ಖಾತಾ ನಕಲು ವಿತರಣೆ ಅಭಿಯಾನ ಮಾಡಿ ಮನೆಮನೆಗೆ ತೆರಳಿ ಫಾರ್ಮ್ 3 ವಿತರಣೆ ಮಾಡುವಂತೆ ಆದೇಶಿಸಿದಂತೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಬಡವರ ಮನೆ ಸೇರುವಲ್ಲಿ ಈ ಅಭಿಯಾನದಿಂದ ಉತ್ತಮ ಕಾರ್ಯವಾಗಿದೆ ಎಂದರು.
ಅಭಿಯಾನದಿಂದಾಗುವ ಅನುಕೂಲಗಳು : ಈ ಅಭಿಯಾನದಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ, ಹಣ ಪಾವತಿ ಮಾಡಿ ತೆರಿಗೆ ಕಟ್ಟಿದ ರಸೀದಿ ಪ್ರತಿಗಳಿದ್ದಲ್ಲಿ ಹಾಗೂ ಹಕ್ಕು ನಿರೂಪಿಸುವ ದಾಖಲಾತಿಗಳಿದ್ದಲ್ಲಿ ಬಡವರ ಮನೆಗೆ ನೇರವಾಗಿ ಖಾತಾ ನಕಲು ಪ್ರತಿ ತಲುಪುತ್ತದೆ, ಹಣ ಮಾಡುವ ಉದ್ದೇಶದಲ್ಲಿ ಮದ್ಯವರ್ತಿಗಳು ಅಧಿಕಾರಿಗಳ ಹೆಸರು ದುರ್ಬಳಕೆ ಮಾಡುವುದು ದೂರವಾಗುತ್ತದೆ, ಕಚೇರಿ ಅಲೆದಾಟ ತಪ್ಪುತ್ತದೆ ಅಲ್ಲದೆ ಇತರೆ ಅನುಕೂಲತೆಗಳು ಸಾರ್ವಜನಿಕರಿಗೆ ಈ ಅಭಿಯಾನದಿಂದ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳು ಆದೇಶಿಸಿದಂತೆ ಈ ಅಭಿಯಾನವನ್ನು ಇಂದಿನಿಂದಲೇ ಪ್ರಾರಂಭಮಾಡಿರುವುದಾಗಿ ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರು ಇದ್ದರು.