ಇತ್ತೀಚಿನ ಸುದ್ದಿ
ಕುಡಿಯುವ ನೀರಿಗೆ ಹಲವು ಕಿಮೀ ನಡಿಗೆ: ಅಭಿವೃದ್ಧಿಯನ್ನೇ ಕಾಣದ ಬೆಳಗಾವಿ ಗಡಿಭಾಗದ ಕುಗ್ರಾಮ!; ಸಿದ್ದರಾಮಯ್ಯ ಸರಕಾರವಾದರೂ ಸ್ಪಂದಿಸಿತೇ?
16/06/2023, 18:01

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸ್ವಾತಂತ್ರ, ಬಂದು ದಶಕಗಳೇ ಕಳೆದರೂ ಗಡಿಭಾಗದ ಇನ್ನೂ ಕೆಲ ಗ್ರಾಮಗಳು ಮೂಲಭೂತ ಸೌಕರ್ಯಗಳಿಂತ ವಂಚಿತವಾಗಿವೆ. ಆರೋಗ್ಯ, ಕುಡಿಯುವ ನೀರು ಹಾಗೂ ಬಸ್ ಸೌಕರ್ಯ ಪಡೆಯಲು ಹತ್ತಾರು ಕಿ.ಮೀ ಅಲೆದಾಡುವ ಪರಿಸ್ಥಿತಿ ಈವರೆಗೂ ಜೀವಂತವಾಗಿದ್ದು, ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮೂಲ ಸೌಕರ್ಯ ಒದಗಿಸುವಲ್ಲಿ ಇಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರಕಾರಗಳು ವಿಫಲವಾಗಿವೆ. ಇದರಿಂದ ಹತಾಶಗೊಂಡ ಸ್ಥಳೀಯರು ಗಡಿಭಾಗ ಮಹಾರಾಷ್ಟ್ರಕ್ಕೆ ಸೇರಲು ಬಿಡಿ ಎನ್ನುತ್ತಿದ್ದಾರೆ.
ಕಾಗವಾಡ ತಾಲೂಕಿನ ಅರಳಿಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮನಾಳ ಎಂಬ ಪುಟ್ಟ ಗ್ರಾಮದ ಜನ ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರಸ್ತುತ ವರ್ಷದ ಮುಂಗಾರು ಮಳೆ ಆಗದ ಹಿನ್ನಲೆಯಲ್ಲಿ ಜನ ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬೆಳೆದ ಬೆಳೆ ಮಳೆಯ ಅಭಾವದಿಂದ ಒಣಗಿದ್ದು ಜಾನುವಾರುಗಳು ಮೇವಿಲ್ಲದೆ ಕಂಗಾಲಾಗಿವೆ. ಸದ್ಯ ಬೊಮ್ಮನಾಳ ಗ್ರಾಮಕ್ಕೆ ಕೇವಲ ಒಂದು ಬಸ್ ಬರುತ್ತಿದ್ದು ಅದಕ್ಕೂ ಸರಿಯಾದ ಸಮಯವೂ ಇಲ್ಲ, ಇನ್ನೂ ಜನ ಆಸ್ಪತ್ರೆಗೆ ತೆರಳ ಬೇಕೆಂದರೆ ಹತ್ತಾರು ಕಿ. ಮೀ ದೂರ ಸಂಚರಿಸಬೇಕು. ಹಾಗೆಯೇ ನೀರಿಗಾಗಿ ಮಹಿಳೆಯರು ದೂರದವರೆಗೂ ಬಿಸಿಲಿನಲ್ಲಿ ನಡೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಈವರೆಗೂ ಸರಕಾರ ಹಾಗೂ ಸ್ಥಳೀಯ ಅಧಿಕಾರಿಗಳಿ ಗಮನಹರಿಸದೇ ಇರುವುದು ದುರದೃಷ್ಟಕರ ಸಂಗತಿ.
ಒಂದು ಕಡೆ ಮಹಾರಾಷ್ಟ್ರ ಗಡಿ ಭಾಗದ ಕರ್ನಾಟಕ ಅಭಿವೃದ್ಧಿ ವಂಚಿತ ಹಳ್ಳಿಗಳನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇತ್ತ ಕರ್ನಾಟಕ ಸರಕಾರ ತನಗೆ ಯಾವುದು ಸಂಬಂಧ ಇಲ್ಲದಂತೆ ವರ್ತನೆ ಮಾಡುತ್ತಿರುವುದು ವಿಪರ್ಯಾಸ. ಅತ್ತಕಡೆ ಆರೋಗ್ಯ ವಿಮೆಯಂತಹ ಯೋಜನೆ ತರುತ್ತಿದ್ದರೆ, ನಮ್ಮಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಭಿವೃದ್ಧಿಗೆ ಹಿಡಿದ ಕನ್ನಡಿಯೇ ಸರಿ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಇತ್ತ ಕಡೆ ಗಮನ ಹರಿಸಿದರೆ ಒಳಿತು.