ಇತ್ತೀಚಿನ ಸುದ್ದಿ
Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ ಯಾತ್ರೆ
03/10/2025, 14:28

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ಜನೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಸೇರ್ಪಡೆಗೊಂಡಿದ್ದಾರೆ. ಮಡಿಕೇರಿ ಜಿ.ಟಿ. ವೃತ್ತ, ನಗರಸಭೆ ಮುಂಭಾಗ ಹಾಗೂ ಗಾಂಧಿ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಂಡುಬಂದಿದ್ದಾರೆ.
ಕೆಲವು ಮಂಟಪಗಳ ಡಿಜೆ ಸಂಗೀತಕ್ಕೆ ಮಾರುಹೋಗಿ ಕುಣಿದು ಕುಪ್ಪಳಿಸಿದ್ದಾರೆ. ಗಾಂಧಿ ಮೈದಾನದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು. ಆಸನಗಳೆಲ್ಲವೂ ಭರ್ತಿಯಾಗಿ ಪ್ರೇಕ್ಷಕರು ಗುಂಪು ಗುಂಪಾಗಿ ನಿಂತುಕೊಂಡೆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ದಶಮಂಟಪಗಳ ಕಡೆಯಿಂದ ಶೋಭಾ ಯಾತ್ರೆ ಆರಂಭಗೊಂಡಿದ್ದು ಪೇಟೆ ರಾಮ ಮಂದಿರ ಮಂಟಪ ಈಗಾಗಲೇ ಚೌಟಿ ಮಾರಿಯಮ್ಮ ದೇಗುಲದ ಮುಂಭಾಗಕ್ಕೆ ಆಗಮಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇಡೀ ನಗರ ಸಿಸಿಟಿವಿಯ ಕಣ್ಗಾವಲಿನಲ್ಲಿದೆ. ಈ ಬಾರಿ ನಗರದಲ್ಲಿ ವಿದ್ಯುತ್ ದೀಪ ಅಲಂಕಾರ ಹೆಚ್ಚಿನ ಶೋಭೆಯನ್ನು ನೀಡಿದೆ. ದಸರಾ ಜನೋತ್ಸವದ ಯಶಸ್ವಿಗಾಗಿ ಸಮಿತಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದು ವರುಣನ ಸಿಂಚನವಿಲ್ಲದೆ, ಮಂಜಿನ ನಗರಿ ಮಡಿಕೇರಿಯಲ್ಲಿ ತಂಪಾದ ಹವೆಯಲ್ಲಿ ಪ್ರೇಕ್ಷಕರು ದಶಮಂಟಪಗಳ ಚಲನವಲನದ ಕಥಾಪ್ರಸಂಗವನ್ನು ವೀಕ್ಷಿಸಿದರು. ಒಟ್ಟಿನಲ್ಲಿ ಮಡಿಕೇರಿ ದಸರಾ ಈ ಬಾರಿಯೂ ಕೂಡ ತನ್ನ ವೈಭವವನ್ನು ಸಾರಿದೆ.