ಇತ್ತೀಚಿನ ಸುದ್ದಿ
ಕೇಂದ್ರ- ರಾಜ್ಯ ಸರಕಾರ ವಿರುದ್ದದ ಜನರ ಧ್ವನಿಗೆ ಶಕ್ತಿ ತುಂಬಲು ಪ್ರಜಾಧ್ವನಿ ಸಮಾವೇಶ: ಶಾಸಕ ಡಾ. ಮಂಜುನಾಥ ಭಂಡಾರಿ
22/01/2023, 11:48

ಮಂಗಳೂರು(reporterkarnataka.com):ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಉಭಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲೂ ಜನರಿಗೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಧ್ವನಿಗೆ ಶಕ್ತಿ ತುಂಬವ ಪ್ರಯತ್ನವೇ ಪ್ರಜಾಧ್ವನಿ ಎಂದು ಶಾಸಕ ಡಾ. ಮಂಜುನಾಥ ಭಂಡಾರಿ ಹೇಳಿದ್ದಾರೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ , ಚುನಾವಣಾ ಆಯೋಗದಂತಹ ಪ್ರಾಧಿಕಾರಗಳು ಕೆಲಸ ಮಾಡದಂತೆ ಮಾಡಿದ್ದಾರೆ. ಸರಕಾರದ ಯಾವುದೇ ಯೋಜನೆಗಳು ಕೂಡ ಸರಿಯಾಗಿ ಜಾರಿ ಆಗುತ್ತಿಲ್ಲ. ಅನೇಕ ಯೋಜನೆಗಳ ಬಗ್ಗೆ ಸುಳ್ಳು ಭರವಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮರೆಮಾಚಿ ರಾಜ್ಯ ಸರಕಾರ ಜನರ ಕಣ್ಣಿಗೆ ಮಣ್ಣೆರಚ್ಚುತ್ತಿದೆ. “ರಾಜ್ಯ ಸರಕಾರ ಕೃಷಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಕೃಷಿಕರಿಗೆ ಪೂರಕವಾಗಿ ಯಾವುದೇ ಯೋಜನೆಗಳನ್ನು ಜಾರಿ ಆಗುತ್ತಿಲ್ಲ ಎಂದು ಆರೋಪಿಸಿದರು.
ಜನ ಸಾಮಾನ್ಯರ ಧ್ವನಿಯಾಗಿ ಸರಕಾರದ ವೈಫಲ್ಯವನ್ನು ಖಂಡಿಸಲು ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಸ್ನೇಹಿ, ಜನಪರ, ಜನಹಿತಕ್ಕಾಗಿ ಕಾರ್ಯನಿರ್ವಹಿಸುವ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ “ಪ್ರಜಾಧ್ವನಿ ಯಾತ್ರೆ” ಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ “ಗೃಹಜ್ಯೋತಿ” ಹಾಗೂ “ಗೃಹಲಕ್ಷ್ಮೀ” ಎಂಬ ಎರಡು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.