ಇತ್ತೀಚಿನ ಸುದ್ದಿ
ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ
26/02/2024, 18:16

ಮಂಗಳೂರು(reporterkarnataka.com): ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ. ಅವರು ಮರಣವಪ್ಪಿದ್ದು ಕೂಡಾ ಇಲ್ಲೇ. ಹಾಗಾಗಿ ಅವರು ದೋಚಲಿಲ್ಲ. ಈ ದೇಶದ ಹಿಂದುಗಳು ಶೇಕಡಾ 24ರಷ್ಟು ಹಿಂದುಳಿದಿದ್ದರೆ ಮುಸ್ಲಿಮರು ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರು ದೋಚಿದ್ದರೆ ಹಿಂದುಗಳಿಗಿಂತ ಶ್ರೀಮಂತರಾಗಬೇಕಿತ್ತು. ಈ ಕಹಿಸತ್ಯವನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು ಎಂದು ಜೆಎನ್ಯು ನಿವೃತ್ತ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಉಡುಗೊರೆ ಪ್ರಕಾಶನ ಪ್ರಕಟಿಸಿದ ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನವನ್ನು ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅತಿ ಹೆಚ್ಚು ಪ್ರಾಣ ತ್ಯಾಗ ಮಾಡಿರುವವರು ಮುಸ್ಲಿಮರು. ಆದರೆ ಇಂದು ಆ ಸತ್ಯವನ್ನು ಮರೆಮಾಚಲಾಗುತ್ತಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯನ್ನು ಗಲ್ಲಿಗೇರಿಸುವಾಗ ಮಝಫರ್ ನಗರದ ಹಬೀಬಾರನ್ನು ಕೂಡಾ ಗಲ್ಲಿಗೇರಿಸಲಾಗಿದೆ. ಅಸ್ಗರಿ ಬೇಗಂ ಅವರನ್ನು ಕೂಡಾ ಬೆಂಕಿಗೆ ಹಾಕಿ ಕೊಲ್ಲಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನೇ ಅಳಿಸಲಾಗುತ್ತಿದೆ ಎಂದರು.
ಕಥೆಗಾರ್ತಿ ಸುಧಾ ಆಡುಕಳ ಕೃತಿಯನ್ನು ಪರಿಚಯಿಸಿದರು. ಕವಯಿತ್ರಿ ಫಾತಿಮಾ ರಲಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕಿ ಉಮೈರತ್ ಕುಮೇರು ಸ್ವಾಗತಿಸಿದರು. ಕವಿ ವಿಲ್ಸನ್ ಕಟೀಲ್ ಮುಖ್ಯ ಅತಿಥಿಗಳಾಗಿದ್ದರು, ಪತ್ರಕರ್ತ ಮುಆದ್ ಜಿ.ಎಂ ಕವನ ವಾಚಿಸಿದರು. ಎಚ್.ಎಂ ಪೆರ್ನಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.