ಇತ್ತೀಚಿನ ಸುದ್ದಿ
Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ
11/04/2025, 18:05

ಬೆಂಗಳೂರು(reporterkarnataka.com): ಕಾಂಗ್ರೆಸ್ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ವಿಧಾನ ಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ‘ಭೀಮ ಹೆಜ್ಜೆ 100 ರ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ದಲಿತರ ಬಗ್ಗೆ ಮಾತಾಡುವಾಗಲೆಲ್ಲ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷ ಶೋಷಿತರನ್ನು ಕಾಂಗ್ರೆಸ್ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ನ ಕಳ್ಳರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ರ ಹೆಸರನ್ನು ಕಾಂಗ್ರೆಸ್ನವರು ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ದೂರಿದರು.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್ನಿಂದಾದ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರ ದಲಿತರ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು, ಕಾಂಗ್ರೆಸ್ನ ಪೊಳ್ಳು ಭರವಸೆಗಳು ಹೋಗಬೇಕು ಎಂದರು.
*ಜಾತಿ ಗಣತಿ ವೈಜ್ಞಾನಿಕವಲ್ಲ:*
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಇದನ್ನು ಯಾರೂ ಒಪ್ಪಲ್ಲ. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್ಗೆ ಇದೇ ಬೇಕಾಗಿದೆ ಎಂದರು.
ಗುತ್ತಿಗೆದಾರರು ಕಮಿಶನ್ ಆರೋಪ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭೆ ಮಾಡಿ ಚರ್ಚಿಸಲಿ. ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಶನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ. ಸಚಿವರ ಮೇಲೆ ಇಷ್ಟೆಲ್ಲ ಆರೋಪ ಬಂದರೂ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಭ್ರಷ್ಟಾಚಾರವೇ ನಮ್ಮ ಬಂಧು ಬಳಗ ಎಂದು ಕಾಂಗ್ರೆಸ್ ಘೋಷಣೆ ಮಾಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇರಲು ಕಮಿಶನ್ ವಸೂಲಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲು ಕಮಿಶನ್ ಸಂಗ್ರಹಿಸುತ್ತಿದ್ದಾರೆ. ಸಚಿವರು ಕೂಡ ಸಿಎಂ ಆಗಲು ಕಮಿಶನ್ ಮಾಡುತ್ತಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದೆ. ಜೊತೆಗೆ ಜನರ ಮೇಲೆ 80 ಸಾವಿರ ಕೋಟಿ ರೂ. ತೆರಿಗೆ ಹಾಕಿದ್ದಾರೆ ಎಂದು ದೂರಿದರು.
ಜೆಡಿಎಸ್ನ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಯಾವ ಹೋರಾಟ ಒಟ್ಟಿಗೆ ಮಾಡಬೇಕು, ಪ್ರತ್ಯೇಕ ಮಾಡಬೇಕೆಂದು ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲಾಗುವುದು. ನಮ್ಮ ಅವರ ನಡುವಿನ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವೇ ಇಲ್ಲ ಎಂದರು.