ಇತ್ತೀಚಿನ ಸುದ್ದಿ
ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ
19/01/2026, 11:49
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹುಣಸೂರಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ವರು ಅಂತರ್ ರಾಜ್ಯ ದರೋಡೆ ಕೋರರ ಬಂಧಿಸಲಾಗಿದೆ.
ಹುಣಸೂರು ಪೊಲೀಸ್ ಹಾಗೂ ಬಿಹಾರ ಎಸ್ ಟಿ ಎಫ್ ತಂಡದ ವಿಶೇಷ ಕಾರ್ಯಾಚರಣೆ ನಡೆಸಿ ಬಿಹಾರದ ದರ್ಬಾಂಗ್ ನ ಬಾಗಲ್ಪರದ ವಿವಿಧೆಡೆ ದಾಳಿ ನಡೆಸಿ ಖರಾರಿ ನಿವಾಸಿ ರಿಷಿಕೇಶ್ ಸಿಂಗ್ ಅಲಿಯಾಸ್ ಛೋಟು ಸಿಂಗ್ ಹಾಗೂ ಪಕ್ರಾ ಗ್ರಾಮದ ಪಂಕಜ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.
ಡಿ.28ರ ಮಧ್ಯಾಹ್ನ ಪಿಸ್ತೂಲ್ ತೋರಿಸಿ. ಗಾಳಿಯಲ್ಲಿ ಗುಂಡು ಹಾರಿಸಿ. ಹುಣಸೂರು ಬೈಪಾಸ್ ರಸ್ತೆಯ ಚಿನ್ನಾಭರಣ ಅಂಗಡಿಯಲ್ಲಿ ಬರೋಬರಿ 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್ ಖದೀಮರು ಇವರಾಗಿದ್ದಾರೆ.
ಬಿಹಾರ ಪೊಲೀಸರ ನೆರವಿನೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಬೈಕ್, ಚಿನ್ನದ ಸರ, ಒಂದು ಲಕ್ಷ ರೂ. ನಗದು, ಆಭರಣ ಪೆಟ್ಟಿಗೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಂಕಜ್ ಕುಮಾರ್ ವಿರುದ್ದ ಕರ್ನಾಟಕ, ಬಿಹಾರ, ರಾಜಸ್ತಾನ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಕೊಲೆಯತ್ನ, ದರೋಡೆ, ಡಕಾಯಿತಿ ಸೇರಿದಂತೆ 16 ಪ್ರಕರಣ ದಾಖಲಾಗಿದೆ. ರಿಷಿಕೇಶ್ ಸಿಂಗ್ ವಿರುದ್ದ ಬಿಹಾರ, ಕರ್ನಾಟಕದಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ.












