ಇತ್ತೀಚಿನ ಸುದ್ದಿ
ಹೆರಿಗೆ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರು ಮಾಡಿದರೇ ಎಡವಟ್ಟು?: 25 ದಿನಗಳಿಂದ ಕೋಮಾದಲ್ಲಿದ್ದ ಬಾಣಂತಿ ಸಾವು
26/07/2023, 11:52

ಮಂಗಳೂರು(reporterkarnataka.com): ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಬಳಿಕ ಕೋಮಾ ಸ್ಥಿತಿಗೆ ಹೋಗಿದ್ದ ಶಿಲ್ಪಾ ಆಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ.
ನಗರದ ಕುಂಟಿಕಾನ ಬಳಿಯ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ ಹೆರಿಗೆಗಾಗಿ ಶಿಲ್ಪಾ ಆಚಾರ್ಯ ಅವರನ್ನು ದಾಖಲಿಸಲಾಗಿತ್ತು. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಆದ ಎಡವಟ್ಟಿಗೆ ಗರ್ಭಕೋಶಕ್ಕೆ ಹಾನಿಯಾಗುವುದರ ಜತೆಗೆ ಮೆದುಳು ನಿಷ್ಕ್ರಿಯಗೊಂಡಿರುವುದು ಶಿಲ್ಪಾ ಅವರು ಕೋಮ ಸ್ಥಿತಿಗೆ ಹೋಗಲು ಕಾರಣ ಎಂದು ಶಿಲ್ಪಾ ಅವರ ಸಂಬಂಧಿಕರು ಹಾಗೂ ಪ್ರಕರಣದ ಕುರಿತು ಹೋರಾಟ ನಡೆಸಿಕೊಂಡು ಬಂದ ಡಿವೈಎಫ್ ಐ ಸಂಘಟನೆ ಆಪಾದಿಸಿದೆ.
ಶಿಲ್ಪಾ ಅವರು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ 25 ದಿನಗಳು ಕಳೆದಿವೆ. ಮನೆಯಲ್ಲಿ ಶಿಲ್ಪಾ ಅವರ 12 ವರುಷದ ಹೆಣ್ಣು ಮಗಳು ನಮೃತಾ ತನ್ನ ತಾಯಿ ಮತ್ತು ಜನಿಸಿದ ಮುದ್ದು ತಂಗಿಯ ಜೊತೆ ಒಂದೆರಡು ದಿನದಲ್ಲಿ ಮರಳಿ ಮನೆಗೆ ಬರಬಹುದೆಂದು ಕಾಯುತ್ತಾ ಕುಳಿತಿದ್ದಾಳೆ. ಅಮ್ಮ ಯಾವಾಗ ಮನೆ ಬರುತ್ತಾರೆಂದು ದಿನಾ ವಿಚಾರಿಸುವ ಹಿರಿಯ ಮಗಳಿಗೆ ಇವತ್ತು ನಾಳೆ ಎಂದು ಕಳೆದ 25 ದಿನಗಳಿಂದ ಮನೆಮಂದಿ ಸಮಾಧಾನ ಪಡಿಸುತ್ತಿದ್ದಾರೆ.
ಇವತ್ತಲ್ಲ ನಾಳೆ ಗುಣ ಹೊಂದಬಹುದೆಂದು ಶಿಲ್ಪಳಾ ತಂದೆ, ತಾಯಿ, ಸಹೋದರ, ಗಂಡ ಆಸ್ಪತ್ರೆಯ ಬಾಗಿಲ ಬಳಿ ಕಾಯುತ್ತಾ ಕುಳಿತಿದ್ದಾರೆ. ಇದೀಗ ಶಿಲ್ಪಾ ಕೊನೆಯುಸಿರೆಳೆದ್ದಿದ್ದಾರೆ.
ಪ್ರಕರಣ ಬೆಳಕಿಗೆ ಬಂದು ವ್ಯಾಪಕ ಚರ್ಚೆಗೊಳಗಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ಸರಕಾರ, ಆರೋಗ್ಯ ಮಂತ್ರಿಗಳಿಗೆ ಬಡವರ ಕೂಗೂ ಕೇಳಲೇ ಇಲ್ಲ. ಸರಕಾರಗಳು ಬದಲಾದರೂ ಖಾಸಗೀ ಆಸ್ಪತ್ರೆಗಳ ಬಡವರ ಬಗೆಗಿನ ನಿರ್ಲಕ್ಷ್ಯ, ಬೇಜವಾಬ್ದಾರಿ, ಲೂಟಿಕೋರ ನೀತಿಗಳಿಗೆ ಕಡಿವಾಣ ತರಲು ಈ ಸರಕಾರಗಳಿಗೂ ಎದೆಗಾರಿಕೆ ಇಲ್ಲ. ಬಡವರ ಕಾಳಜಿ, ಏಳಿಗೆಗಳೆಲ್ಲವೂ ಬರಿಯ ಚುನಾವಣಾ ರಾಜಕೀಯಕಷ್ಟೇ ಸೀಮಿತ. ಇಲ್ಲಿ ಆಡಳಿತ ದರಬಾರುಗಳೆಲ್ಲವೂ ಧಣಿಕರ ಕೈಯೊಳಗಷ್ಟೆ. ಅನ್ಯಾಯ, ದಬ್ಬಾಳಿಕೆ ,ದೌರ್ಜನ್ಯ ಅದರಷ್ಟಕ್ಕೆ ಕೊನೆಯಾಗೋದಿಲ್ಲ. ಅದರ ವಿರುದ್ಧ ಸಂಘಟಿತ ದ್ವನಿಮೊಳಗಬೇಕು. ಇಂದು ಶಿಲ್ಪ ನಾಳೆ ನಮ್ಮ ಮನೆಯ ಹೆಣ್ಣು ಮಗಳು ಬಲಿಯಾಗೋದಕ್ಕಿಂತ ಮುಂಚೆ ಎಚ್ಚರಗೊಳ್ಳೋಣ ಎಂದು ದ.ಕ.ಡಿವೈಎಫ್ಐ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.