ಇತ್ತೀಚಿನ ಸುದ್ದಿ
ಹರಿದ್ವಾರದಲ್ಲಿ ಪೇಜಾವರ ಶ್ರೀ ಹಾಗೂ ಕಾಶೀ ಮಠಾಧೀಶರ ಸಮಾಗಮ: ವ್ಯಾಸ ಘಾಟ್ ನಲ್ಲಿ ಗಂಗಾ ದರ್ಶನ
26/06/2022, 16:40

ಹರಿದ್ವಾರ(reporterkarnataka.com): ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಶೀ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಹರಿದ್ವಾರದಲ್ಲಿ ಭೇಟಿಯಾದರು.
ಉಡುಪಿಯ ಶ್ರೀ ಸಂಸ್ಥಾನ ಪೇಜಾವರದ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಶ್ರೀ ಕಾಶೀ ಮಠ ಸಂಸ್ಥಾನದ ಹರಿದ್ವಾರ ಪುಣ್ಯಕ್ಷೇತ್ರದಲ್ಲಿರುವ ಶ್ರೀ ವ್ಯಾಸ ಆಶ್ರಮದಲ್ಲಿರುವ ಶ್ರೀ ವ್ಯಾಸ ಮಂದಿರದಲ್ಲಿ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃನ್ದಾವನ ಭೇಟಿ ಬಳಿಕ ವ್ಯಾಸ ಘಾಟ್ ನಲ್ಲಿ ಗಂಗಾ ದರ್ಶನ ನಡೆಸಿದರು.
ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಪೇಜಾವರ ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿ ಸ್ವಾಗತಿಸಿದರು. ಪರಸ್ಪರ ಯತಿಗಳವರು ಪುಷ್ಪ ಮಾಲಾರ್ಪಣೆ ಮೂಲಕ ಅಭಿನಂದಿಸಿದರು .
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮಾತನಾಡುತ್ತಾ ಶ್ರೀಗಳವರ ಬಾಂಧವ್ಯ , ಸ್ನೇಹ ಕಂಡು ತುಂಬಾ ಸಂತೋಷವಾಯಿತು. ನಮ್ಮೆಲ್ಲರಿಗೂ ಮೂಲಗುರುಗಳಾದ ಮಧ್ವಾಚಾರ್ಯರಿಗೆ ಸ್ಮರಿಸುತ್ತಾ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರಿಗೆ ಶ್ರೀ ಗಳವರು ಸಂಸ್ಥಾನ ಹಾಗೂ ಭಕ್ತಜನರು ಸಮರ್ಪಿಸಿದನ್ನು ಸಂತೋಷದಿಂದ ಸ್ವೀಕರಿಸಲಾಗಿದೆ. ತಮ್ಮ ಗುರುಗಳಾದ ವೃನ್ದಾವನಸ್ಥ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥರು ಹರಿದ್ವಾರಕ್ಕೆ ಬಂದ ಸಂದರ್ಭದಲ್ಲಿ ವ್ಯಾಸಾಶ್ರಮದಲ್ಲಿರುವ ವ್ಯಾಸ ಘಾಟಿಗೆ ಬಂದು ಪುಣ್ಯ ಗಂಗಾ ಸ್ನಾನ , ಶ್ರೀ ದೇವರಿಗೆ ಪೂಜಾ ಪುರಸ್ಕಾರ ನಡೆಸುತ್ತಿದ್ದರು ಎಂದು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕೊಚ್ಚಿನ್ ತಿರುಮಲ ದೇವಳದ ಮೊಕ್ತೇಸರರಾದ ಜಗನ್ನಾಥ್ ಶೆಣೈ , ಜಿಎಸ್ ಬಿ ಸೇವಾಮಂಡಳದ ಆರ್ . ಜಿ . ಭಟ್ , ದೆಹಲಿ ಜಿ ಎಸ್ ಬಿ ಸಮಾಜದ ಪ್ರಕಾಶ್ ಪೈ ಉಪಸ್ಥಿತರಿದ್ದರು .