ಇತ್ತೀಚಿನ ಸುದ್ದಿ
ಗ್ಯಾರಂಟಿ ಯೋಜನೆ 6 ತಿಂಗಳೊಳಗೆ ಅನುಷ್ಠಾನ ಸಾಧ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಯು.ಟಿ. ಖಾದರ್
08/05/2023, 16:15

ಮಂಗಳೂರು(reporterkarnataka.com): ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು 6 ತಿಂಗಳೊಳಗೆ ಜಾರಿ ತರಲು ವಿಫಲವಾದರೆ ತಾನು ತನ್ನ ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದರು.
ಸೋಮವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತರಲಾಗುವುದು. ಎಲ್ಲಾದರೂ 6 ತಿಂಗಳು ಕಳೆದರೂ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲು ಸಾದ್ಯವಾಗದಿದ್ದರೆ ತಾನು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ನಿರುದ್ಯೋಗಿ ಪದವೀಧರರಿಗೆ ನೌಕರಿ ಸಿಗುವ ತನಕ ತಿಂಗಳಿಗೆ 3 ಸಾವಿರ ರೂ. ನೀಡಲಾಗುವುದು. ಇದರಿಂದ ಮಾರುಕಟ್ಟೆಯಲ್ಲಿ ಆರ್ಥಿಕ ಪುನಶ್ಚೇತನ ಸಾಧ್ಯವಾಗುತ್ತದೆ ಎಂದು ಅವರು ನುಡಿದರು.
ಇದು ಸತ್ಯ ಮತ್ತು ಅಸತ್ಯದ ನಡುವಿನ ಚುನಾವಣೆ. ಪ್ರಚಾರ ಮತ್ತು ಅಪಪ್ರಚಾರದ ನಡುವಿನ ಚುನಾವಣೆ. ಬಿಜೆಪಿಗೆ ಸುಳ್ಳೇ ಬಂಡವಾಳ. ಸತ್ಯ ಏನೂ ಇಲ್ಲ. ಭ್ರಷ್ಟಾಚಾರ, ಅವ್ಯವಹಾರ, ಹಗರಣ ಮತ್ತು ಆಡಳಿತ ವೈಫಲ್ಯದಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಧರ್ಮ, ಜಾತಿಯ ವಿಷಯ ಎತ್ತುತ್ತಿದೆ. ಆದರೆ ಜನಸಾಮಾನ್ಯರು ತಮಗಾದ ನೋವನ್ನು ಓಟಿನ ಮೂಲಕ ತೋರಿಸಲಿದ್ದಾರೆ. ಬಿಜೆಪಿ ಸೋಲುವುದು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಖಾದರ್ ಹೇಳಿದರು.
ಕಾಂಗ್ರೆಸ್ ಸಮಾಜದಲ್ಲಿ ಶಾಂತಿ- ಸೌಹಾರ್ದತೆಯ ಮೂಲಕ ಅಭಿವೃದ್ಧಿ ತರಲು ಬಯಸುತ್ತದೆ. ಬಿಜೆಪಿ ಜನರಿಗೆ ಹೇಗೆ ಮೋಸ ಮಾಡುವುದು ಎನ್ನುವುದರ ಕುರಿತು ಯೋಚಿಸುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಸುರೇಶ್ ಬಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು.