ಇತ್ತೀಚಿನ ಸುದ್ದಿ
ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ: 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
16/02/2026, 14:52
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಈ ನಿಲ್ದಾಣದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿತ್ತು. ಹಾಗಾಗಿ ಹೊಸದಾಗಿ ಅದರಲ್ಲೂ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಮಲೆನಾಡು ಪ್ರದೇಶಾಭಿವೃದ್ದಿ ನಿಗಮ ಮಂಡಳಿಯಿಂದ 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುವ ಸಲುವಾಗಿ ಶಂಕುಸ್ಥಾಪನೆ ಮಾಡಲಾಗಿದೆ. ಈ ನಿಲ್ದಾಣ ಎಲ್ಲರಿಗೂ ಅನುಕೂಲ ಆಗಬೇಕು ಎಂದು ಮಲೆನಾಡು ಪ್ರದೇಶಾಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಆರ್. ಎಂ. ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಬಸ್ ನಿಲ್ದಾಣವನ್ನು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ ಈ ನಿಲ್ದಾಣ ಪ್ರತಿಯೊರ್ವ ಸಾರ್ವಜನಿಕರಿಗೆ ಅನುಕೂಲ ಆಗಬೇಕು. ವಿದ್ಯುತ್ ದೀಪ ಹಾಕಿ ಹಾಗೆ ಸಿಸಿಟಿವಿ ಅಳವಡಿಸಬೇಕು. ತೀರ್ಥಹಳ್ಳಿ ಅತ್ಯಂತ ಸುಂದರವಾದ ಊರು. ಈಗ ಇನ್ನಷ್ಟು ಸುಂದರವಾಗಿ ಕಾಣುವಂತೆ ಆಗಬೇಕು ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ರಸ್ತೆ ಅಗಲವಾದ ಕಾರಣ ಬಸ್ ನಿಲ್ದಾಣ ಸಣ್ಣದಾಯಿತು. ಇಲ್ಲಿ ಸಾಗರ ರಸ್ತೆ ಹಾಗೂ ಆಗುಂಬೆ ಕಡೆ ಎರಡು ಭಾಗದಲ್ಲಿ ಬಸ್ ನಿಲ್ದಾಣ ಇದೆ. ಆದರೆ ಸಣ್ಣದಾಗಿರುವ ಕಾರಣ ಅದರಲ್ಲೂ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿತ್ತು. ಈ ಕಾರಣದಿಂದ ಇಂದು ಶಂಕು ಸ್ಥಾಪನೆ ಮಾಡಿದ್ದೇವೆ. ಇದನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಾಗೆ ಭಾರತಿಪುರದಿಂದ ಬೈಪಾಸ್ ಆಗುತ್ತಿದೆ. ಇನ್ನು ಆಗುಂಬೆಯಲ್ಲಿ ಟನಲ್ ಮಾಡಲು ಈಗಾಗಲೇ ಎಲ್ಲಾ ತಯಾರಿ ನಡೆದಿದೆ. ಒಟ್ಟಾರೆ ತೀರ್ಥಹಳ್ಳಿ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರಹಮತ್ ಉಲ್ಲಾ ಅಸಾದಿ, ಜ್ಯೋತಿ ಮೋಹನ್, ನವೀನ್ ಏತಿರಾಜ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ಶಬನಮ್, ಸಂದೇಶ್ ಜವಳಿ, ರಾಘವೇಂದ್ರ ಶೆಟ್ಟಿ, ಡಾ. ಸುಂದರೇಶ್, ಬಸವಾನಿ ವಿಜಯ್ ದೇವ್, ಜೀನ ವಿಕ್ಟರ್ ಡಿಸೋಜ ಸೇರಿ ಹಲವರು ಉಪಸ್ಥಿತರಿದ್ದರು.












